ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಟ್ಕಾ,ಮರುಳು ಮಾಫಿಯಾ ಹಾಗೂ ಇಸ್ಪೀಟ್ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ಕನಕಗಿರಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಹೋದಾಗ ಸ್ಥಳೀಯ ಅಧಿಕಾರಿಗಳು ಮಟ್ಕಾ ಹಾಗೂ ಇಸ್ಪೀಟ್, ಮರುಳು ದಂಧೆಕೋರರಿಗೆ ಜತೆ ಭಾಗಿಯಾಗಿದ್ದರಿಂದಲೇ ದಿನದಿಂದ ದಿನಕ್ಕೆ ಅಕ್ರಮ ದಂಧೆಗಳು ಹೆಚ್ಚಾಗಲು ಕಾರಣವಾಗಿವೆ. ಅಕ್ರಮ ದಂಧೆಗಳಲ್ಲಿ ಪ್ರಭಾವಿಗಳ ಕೈವಾಡವಿದ್ದು, ಪೊಲೀಸ್ ಅಧಿಕಾರಿಗಳು ಅಕ್ರಮ ದಂಧೆಕೋರರನ್ನು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ದೇಸಾಯಿಗೌಡ, ಇಮಾಮಸಾಬ್ ಮೇಸ್ತ್ರಿ, ಹನುಮಂತರೆಡ್ಡಿ ದೊಡ್ಡಬಸವ, ಹನುಮೇಶ ಭಜಂತ್ರಿ, ಲಕ್ಷ್ಮಣ್ ಚಿಟಿಗಿ, ವಿಷ್ಣುರೆಡ್ಡಿ ಮಾದಿನಾಳ, ತಿರುಪತಿ ನಾಯಕ ಕಲಿಕೇರಿ ಸೇರಿದಂತೆ ಇತರರಿದ್ದರು.