ರಾಜ್ಯದ ಎಲ್ಲ ಶಾಸಕರಿಗೆ 3 ಚಿನ್ನದ ಬ್ಯಾಡ್ಜ್‌ ಭಾಗ್ಯ!

KannadaprabhaNewsNetwork |  
Published : Feb 22, 2024, 01:50 AM ISTUpdated : Feb 22, 2024, 12:06 PM IST
karnataka mp

ಸಾರಾಂಶ

ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ
ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ. 

ಬೆಂಗಳೂರಿನ ಐ ಡ್ರೀಮ್ಸ್‌ ಟ್ರೇಡ್‌ ಅಂಡ್‌ ಈವೆಂಟ್‌ ಲಿಮಿಟೆಡ್‌ ಕಂಪನಿಯಿಂದ ತಲಾ 2832 ರು. ನಂತೆ ಈ ಬ್ಯಾಡ್ಜ್‌ಗಳನ್ನು ಖರೀದಿ ಮಾಡಲಾಗಿದೆ.

ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್‌ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್‌ ಯು.ಟಿ.ಖಾದರ್‌ ಸೂಚಿಸಿದ್ದಾರೆ.

ಬುಧವಾರ ವಿಧಾನಸಭೆ ಕಾರ್ಯಕಲಾಪದ ವೇಳೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ ಸ್ಪೀಕರ್‌, ಇವತ್ತು ವಿಧಾನಸೌಧಕ್ಕೆ ಬರುವವರೆಲ್ಲರೂ ಶಾಸಕ, ಸಚಿವರ ರೀತಿಯಲ್ಲೇ ಉಡುಪು ಧರಿಸಿ ಬರುತ್ತಾರೆ. 

ಹಾಗಾಗಿ ಮುಂದಿನ ವಿಧಾನಸಭೆ ಅಧಿವೇಶನಕ್ಕೆಎಲ್ಲ ಸದಸ್ಯರೂ ಈ ಬ್ಯಾಡ್ಜ್‌ ಕಡ್ಡಾಯವಾಗಿ ಧರಿಸಿ ಬರಬೇಕು. ಇದರಿಂದ ನಮ್ಮ ಗಾರ್ಡ್‌ಗಳಿಗೂ ಶಾಸಕರನ್ನು ಗುರುತಿಸಲು ನೆರವಾಗುತ್ತದೆ ಎಂದು ತಿಳಿಸಿದರು.

ಸಚಿವಾಲಯದಿಂದ ಎಲ್ಲ ಸದಸ್ಯರಿಗೂ ಒಂದು ಕಿಟ್‌ ಕೊಡಲಾಗಿದೆ. ಅದರಲ್ಲಿ ಪ್ರತಿ ಸದಸ್ಯರಿಗೂ ಗಂಡಭೇರುಂಡ ಲಾಂಛನವುಳ್ಳ ಮೂರು ಬ್ಯಾಡ್ಜ್‌ಗಳನ್ನು ನೀಡಲಾಗಿದೆ. 

ಅದರಲ್ಲಿ ಒಂದನ್ನು ತಮ್ಮ ಊರಿನಲ್ಲಿ, ಇನ್ನೊಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಬಹುದು. ಮೂರನೆಯದು ಪ್ರತಿ ದಿನ ಬಳಕೆಗೆಂದು ನೀಡಲಾಗಿದೆ. 

ಶಾಸಕರು ದೆಹಲಿ ಸೇರಿದಂತೆ ಬೇರೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಹೋಗುವಾಗ ಗೌರವ ಸೂಚಕವಾಗಿ ಈ ಬ್ಯಾಡ್ಜ್‌ ಧರಿಸಿ ಹೋಗಬಹುದು ಎಂದರು.

ಆಸ್ಟ್ರೇಲಿಯಾ ಮಾದರಿ: ಇತ್ತೀಚೆಗೆ ಆಸ್ಟ್ಟೇಲಿಯಾದ ಮೇಯರ್‌ ಒಬ್ಬರನ್ನು ಭೇಟಿ ಮಾಡಿದಾಗ ಅವರು ತಮಗೆ ಸರ್ಕಾರದ ಲಾಂಛನದ ಬ್ಯಾಡ್ಜ್‌ ಉಡುಗೊರೆಯಾಗಿ ನೀಡಿದ್ದರು. 

ಅಲ್ಲದೆ, ಅಲ್ಲಿನ ಜನಪ್ರತಿನಿಧಿಗಳು ಗೌರವ ಸೂಚಕವಾಗಿ ಈ ಲಾಂಛನ ಧರಿಸುವುದಾಗಿ ತಿಳಿಸಿದ್ದರು. ಹಾಗಾಗಿ ಇದೇ ಮಾದರಿಯಲ್ಲಿ ನಮ್ಮಲ್ಲೂ ಗಂಡ ಭೇರುಂಡ ಬ್ಯಾಡ್ಜ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್‌ ಈ ಹಿಂದೆ ತಿಳಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ