ಹುಬ್ಬಳ್ಳಿ: ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ ಪರವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಕೂಡಲಸಂಗಮ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಡಿದೆದ್ದಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನೇ "ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್ "ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಧ್ಯಕ್ಷರನ್ನಾಗಿ ಕಾಶಪ್ಪನವರ, ಪ್ರಧಾನ ಕಾರ್ಯದರ್ಶಿಯನ್ನಾಗಿ ನೀಲಕಂಠ ಅಸೂಟಿ, ಕಾರ್ಯಧ್ಯಕ್ಷರನ್ನಾಗಿ ರಾಜಶೇಖರ ಮೆಣಸಿನಕಾಯಿ ಹಾಗೂ ಗೌರವ ಅಧ್ಯಕ್ಷರನ್ನಾಗಿ ಪ್ರಬಣ್ಣ ಹುಣಸಿಕಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಇದೇ ವೇಳೆ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಲಾಯಿತು. ಈಗ ನೇಮಕಗೊಂಡಿರುವ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಶೀಘ್ರವೇ ರಾಜ್ಯಾದ್ಯಂತ ಪ್ರವಾಸ ನಡೆಸಿ ಹೊಸದಾಗಿ ಜಿಲ್ಲಾ, ತಾಲೂಕು ಘಟಕಗಳನ್ನು ನೂತನವಾಗಿ ರಚಿಸಬೇಕು. ಜತೆಗೆ ಸಮಾಜವನ್ನು ಸಂಘಟಿಸಲು ಕ್ರಮ ಕೈಗೊಳ್ಳಬೇಕು. ಶ್ರೀ ಪೀಠದ ಅಡಿಗಲ್ಲು ಸಮಾರಂಭ, ಸಮಾಜದ ಸಂಘಟನೆ ಬಲಪಡಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.ಸಭೆಯ ಅಧ್ಯಕ್ಷತೆಯನ್ನು ಹಿರಿಯ ಧರ್ಮದರ್ಶಿ ಎಸ್.ಡಿ. ಕೊಳ್ಳಿ ವಹಿಸಿದ್ದರು. ಇದಕ್ಕೂ ಪೂರ್ವದಲ್ಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಬಣ್ಣ ಹುಣಸಿಕಟ್ಟಿ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಎಲ್ಲರನ್ನು ಸನ್ಮಾನಿಸಲಾಯಿತು.
ಕುತೂಹಲ: ಈ ನಡುವೆ ಇದೇ ಟ್ರಸ್ಟ್ನ ಅಡಿಯಲ್ಲೇ ಕೂಡಲಸಂಗಮದ ಪೀಠ ನಡೆಯುತ್ತದೆ. ಈ ಟ್ರಸ್ಟ್ ಶ್ರೀಗಳ ವಿರುದ್ಧ ಸಿಡಿದಿದ್ದೆರುವ ಟ್ರಸ್ಟ್ಗೆ ಕಾಶಪ್ಪನವರನ್ನೇ ಅಧ್ಯಕ್ಷರನ್ನಾಗಿ ಮಾಡಿರುವುದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.