ಕನ್ನಡಪ್ರಭ ವಾರ್ತೆ ಕೋಲಾರಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಸಿ ವ್ಯಾಲಿ ನೀರು ಹರಿಯಲು ಸಮರ್ಪಕವಾಗಿ ಕಾಲುವೆ ನಿರ್ಮಾಣ ಮಾಡದ ಕಾರಣ ನೀರು ರೈತರ ಜಮೀನುಗಳಿಗೆ ನುಗ್ಗಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ವಿವಿಧ ಬೆಳೆಗಳಿಗೆ ನಷ್ಟವಾಗಿವೆ ಎಂದು ರೈತ ಗೂಳಿಗಾನಹಳ್ಳಿ ರಾಮು ಅಳಲು ತೋಡಿಕೊಂಡಿದ್ದಾರೆ.ಶ್ರೀನಿವಾಸಪುರ ತಾಲೂಕಿನ ಗೂಳಿಗಾನಹಳ್ಳಿಯ ರೈತ ರಾಮು ಸೇರಿದಂತೆ ಅನೇಕ ರೈತರು ಬೆಳೆದಿರುವ ಕೋಸು, ರಾಗಿ, ಅವರೆಕಾಯಿ, ವಿವಿಧ ಬೆಳೆಗಳ ತೋಟಗಳಿಗೆ ಕೆ.ಸಿ ವ್ಯಾಲಿ ನೀರು ನುಗ್ಗಿರುವುದರಿಂದ ಬೆಳೆಗಳು ನೀರಿನಲ್ಲಿ ಕೊಂಚಿಹೋಗಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದರು.ಅಧಿಕಾರಿಗಳ ನಿರ್ಲಕ್ಷ್ಯ:
ಕೆಸಿ ವ್ಯಾಲಿ ನೀರು ಕಾಲುವೆಗಳ ಮೂಲಕ ಸರಾಗವಾಗಿ ಹರಿಯುವಂತೆ ಮಾಡದೆ ಇರುವುದರಿಂದ ಬೆಳೆಗಳಿಗೆ ನೀರು ನುಗ್ಗುತ್ತಿವೆ ಈ ಬಗ್ಗೆ ರಾಜಕಾರಣಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ ರೈತರನ್ನು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚಿನಪನಹಳ್ಳಿ ಕೆರೆಯಿಂದ ಮಣಿಘಟ್ಟ ಕೆರೆಗೆ ನೀರು ಬಿಟ್ಟಿದ್ದಾರೆ. ಆದರೆ ನೀರು ಹರಿಯಲು ಕಾಲುವೆಗಳನ್ನು ನಿರ್ಮಾಣ ಮಾಡದೆ ಇರುವುದರಿಂದ ರೈತ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ನಷ್ಟ ಆಗಿದೆ.ರೈತರು ಸಾಲ ಮಾಡಿ ಇವತ್ತು ಬೆಳೆ ಬೆಳೆದರು ರೈತರ ಕೈಗೆ ಸಿಗುತ್ತಿಲ್ಲ ಕೆಸಿ ವ್ಯಾಲಿ ಯೋಜನೆ ಯಶಸ್ವಿ ಮಾಡಿದ್ದೇವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಾಯಿಬಡಿದು ಕೊಳ್ಳತ್ತಾ ಇದ್ದರೆ ಆದರೆ ರೈತರ ಕಷ್ಟಗಳನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಡಿಸಿ ಕಚೇರಿ ಮುಂದೆ ಪ್ರತಿಭಟಿಸುವ ಎಚ್ಚರಿಕೆ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆಸಿ ವ್ಯಾಲಿ ನೀರಿನಿಂದ ನಷ್ಟ ಉಂಟಾಗಿರುವುದರಿಂದ ರೈತರ ತೋಟಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ನಷ್ಟವಾದ ಬೆಳೆಗಳ ಸಮೇತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.