ಕನ್ನಡಪ್ರಭ ವಾರ್ತೆ ಕಲಬುರಗಿ
ನಶೆ ಪದಾರ್ಥಗಳಾದ ಶೇಂಧಿ-ಸರಾಯಿಗಳು ಕಿರಾಣಿ ಅಂಗಡಿಗಳಲ್ಲಿ ಮಾರುತ್ತಿರುವುದಲ್ಲದೆ ಅವುಗಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿರುವುದು ದುರಂತದ ವಿಷಯವಾಗಿದೆ. ಮಕ್ಕಳ ಕೈಗೆ ಮದ್ಯ, ಮಾದಕ ವಸ್ತು ಸಿಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ಯಲ್ಲಪ್ಪ ಎಸ್.ನಾಯ್ಕೋಡಿ ಹೇಳಿದರು.ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿರಾಣಿ ಅಂಗಡಿಗಳಲ್ಲಿ ನಶೆ ಪದಾರ್ಥಗಳು ಮಾರಾಟವಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕಿದೆ. ಕುಟುಂಬದಲ್ಲಿ ಯಾರೇ ಮದ್ಯ ವ್ಯಸನಿಗಳಾದಲ್ಲಿ ಇಡೀ ಕುಟುಂಬ ಕಷ್ಟದಲ್ಲಿ ಕೈ ತೊಳೆಯಬೇಕಾಗುತ್ತದೆ. ಸಮಾಜದಲ್ಲಿ ಸ್ವಾಭಿಮಾನದ ಬದುಕು ಸಾಗಿಸಬೇಕಿದ್ದಲ್ಲಿ ದುಶ್ಚಟಗಳಿಂದ ಹೊರಬರಬೇಕಿದೆ ಅವರು ಅಭಿಪ್ರಾಯಪಟ್ಟರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮೊಹಮ್ಮದ್ ಇರ್ಫಾನ್ ಮಹಾಗಾವಿ ಅವರು ಮಾತನಾಡಿ, ಬೀಡಿ, ಸಿಗರೇಟ್, ಶರಾಬಿನಂತೆ ಮೊಬೈಲ್ ಸಹ ವ್ಯಸನವಾಗಿ ಮಾರ್ಪಟ್ಟಿದ್ದು, ನಿಯಂತ್ರಣದಲ್ಲಿ ಇಡದಿದ್ದರೆ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಡಾ.ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಹೋರಾಡಿ ಕೈಯಲ್ಲಿ ಜೋಳಿಗೆ ಹಿಡಿದು ಸಾರ್ವಜನಿಕರಿಂದ ಮದ್ಯ, ದುಶ್ಚಟಗಳ ವಸ್ತುಗಳನ್ನು ಸಂಗ್ರಹಿಸಿ ಚಟಗಳನ್ನು ಬಿಡುವ ಪ್ರತಿಜ್ಞೆ ಮಾಡಿಕೊಳ್ಳುತ್ತಿದ್ದರು ಎಂದು ಸ್ವಾಮೀಜಿಯ ಸಮಾಜಮುಖಿ ಕಾರ್ಯವನ್ನು ನೆನೆದರು.
ಜಿಮ್ಸ್ ಆಸ್ಪತ್ರೆಯ ಮನೋಶಾಸ್ತ್ರ ವಿಭಾಗದ ಡಾ.ಚಂದ್ರಶೇಖರ ಹುಡೇದ್ ಮಾತನಾಡಿ, ವ್ಯಸನಗಳು ಆರಂಭದಲ್ಲಿ ನಮ್ಮ ನಿಯಂತ್ರಣದಲ್ಲಿ ಇರುತ್ತವೆ. ನಂತರ ಕೈಮೀರಿ ಹೋಗುತ್ತವೆ. ವ್ಯಸನಗಳ ನಿಯಂತ್ರಣಕ್ಕೆ ನಾವು ಒಳಗಾದಾಗ ಜೀವನ ಆಪತ್ತಿಗೆ ಸಿಗುತ್ತದೆ. ಆದ್ದರಿಂದ ವ್ಯಸನದ ವಸ್ತುಗಳಿಂದ ಸದಾ ದೂರ ಇರಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.ಇದೇ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿಯವರು, ಪ್ರತಿಜ್ಞಾ ವಿಧಿಯನ್ನು ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬೋಧಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ಘಟಕದಿಂದ ರಂಗಮಂದಿರ ಅವರಣದಲ್ಲಿ ವ್ಯಸನ ಮುಕ್ತ ಶಿಬಿರ ಸಹ ಅಯೋಜಿಸಲಾಗಿತ್ತು.ಜಾಗೃತಿ ಜಾಥಾಗೆ ಚಾಲನೆ: ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಅವರಣದಿಂದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ನಡೆಗೆ ಜಾಗೃತಿ ಜಾಥಾಗೆ ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಚಾಲನೆ ನೀಡಿದರು.
ಕಾರ್ಯಕ್ರದಮಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಡಾ.ರಾಜಕುಮಾರ ಎಲ್. ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿ ವಂದಿಸಿದರು.