ಸಾಹಿತ್ಯಕ್ಕೂ ಜೈ, ಸಿನಿಮಾ ಕ್ಷೇತ್ರದಲ್ಲೂ ಸೈ ಎಂದ ಯುವ ಕವಿ ಕೆಂಪೇಗೌಡ

KannadaprabhaNewsNetwork |  
Published : Feb 09, 2026, 01:45 AM IST
8ಕೆಎಂಎನ್ ಡಿ31,32,33,34 | Kannada Prabha

ಸಾರಾಂಶ

ವೃತ್ತಿಯಲ್ಲಿ ಶಿಕ್ಷಕ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯುವ ಕವಿ ಕೆಂಪೇಗೌಡರು ಹಲವು ಕವಿತೆಗಳನ್ನು ರಚಿಸಿ ಗಮನ ಸೆಳೆಯುವ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವೃತ್ತಿಯಲ್ಲಿ ಶಿಕ್ಷಕ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯುವ ಕವಿ ಕೆಂಪೇಗೌಡರು ಹಲವು ಕವಿತೆಗಳನ್ನು ರಚಿಸಿ ಗಮನ ಸೆಳೆಯುವ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಶಂಭೂನಹಳ್ಳಿಯ ನಿಂಗೇಗೌಡ ಮತ್ತು ಜಯಮ್ಮರ ರೈತ ದಂಪತಿ ಪುತ್ರನಾಗಿ 1971ರಲ್ಲಿ ಜನಿಸಿದ ಕೆಂಪೇಗೌಡರು ಪ್ರೌಢ ಶಿಕ್ಷಣ ನಂತರ ಐಟಿಐ ಡಿಪ್ಲೋಮಾ ಮುಗಿಸಿದರು. ತಮ್ಮ 16ನೇ ವಯಸ್ಸಿನಲ್ಲೆ ಸಾಹಿತ್ಯದ ಕಡೆ ಒಲವು ಬೆಳೆಸಿಕೊಂಡು ಹನಿ ಕವನ ಸಂಕಲನ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಯುವ ಕವಿಯಾಗಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಂಡರು.

ನಂತರ ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅತಿಥಿ ಬೋಧಕರಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ತಮ್ಮ ವೃತ್ತಿಯನ್ನು ರಾಜಧಾನಿ ಬೆಂಗಳೂರಿಗೆ ವರ್ಗಾಯಿಸಿಕೊಂಡು 5 ವರ್ಷಗಳ ಕಾಲ ಶ್ರೀಸಾಯಿದಾಸಂ ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಪ್ರಸ್ತುತ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಲ್ಲರಿಗೂ ಕವಿಯಾಗುವ ಸೌಭಾಗ್ಯ ಲಭಿಸುವುದಿಲ್ಲ. ಆದರೆ, ಕೆಂಪೇಗೌಡರು ಒಂದೆಡೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತು, ಮತ್ತೊಂದೆಡೆ ಕವಿಯಾಗಿ ತಮ್ಮನ್ನು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಲವು ಕವನ ಸಂಕಲಗಳನ್ನು ನೀಡಿ ಸಮಾಜಕ್ಕೆ ಅಗತ್ಯ ಸಂದೇಶ ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಿವೆ.

ಕೆಂಪೇಗೌಡರಿಗೆ ಸರಸ್ವತಿಯ ಕೃಪೆ ಹೆಚ್ಚಾಗಿದ್ದು, ಇವರಿಂದ ಹನಿ ಕವನ ಸಂಕಲನ, ಹಾಸ್ಯ ಗೊಂಚಲು ಕಥಾ ಸಂಕಲನ, ನಾನ್ಯಾರು ನೀನ್ಯಾರು ಒಗಟುಗಳು, ಖುಷಿ ಕೊಟ್ಟ ಋಷಿ ಚುಟುಕುಗಳು ರಚಿತವಾಗಿವೆ. ಲಹರಿ ಕಂಪನಿಗೆ ತಳುಕಿನ ಬೆಡಗಿ ಮತ್ತು ಮುಂಜಾನೆ ಎಂಬ ಧ್ವನಿ ಸುರುಳಿಗೆ ಸಾಹಿತ್ಯ ರಚನೆ, ಸ್ಲಂ ಹುಡ್ಗ- ಸ್ಲಿಂ ಹುಡ್ಗಿ ಸಿನಿಮಾಗೆ ಕಥೆ ಚಿತ್ರಕಥೆ ಬರೆದಿದ್ದಾರೆ. ಇವೆಲ್ಲವೆ ಇನ್ನೂ ಅನೇಕ ಕವನ ಸಂಕಲನಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

ಗೌಡರು ಕವಿತೆಯನ್ನು, ಕಥೆಯನ್ನು, ಒಗಟನ್ನ, ಚುಟುಕನ್ನ, ಧ್ವನಿ ಸುರುಳಿಗೆ ಸಾಹಿತ್ಯವನ್ನ, ಸಿನಿಮಾಗೆ ಚಿತ್ರಕತೆಯನ್ನು ಬರೆಯುವ ಜೊತೆಗೆ ಬಹರ, ನಟನೆ, ನೃತ್ಯ, ಆಟ, ನೋಟ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸುಂದರ ಜೀವನ ನಡೆಸುವ ಕಲೆಯನ್ನು ತಾವು ಕಲಿತು, ತಮ್ಮ ಶಿಷ್ಯ ವೃಂದಕ್ಕೆ ಹೇಳಿಕೊಟ್ಟ ಗುರುವಾಗಿದ್ದಾರೆ. ಈಗಾಗಲೇ ಇವರ ಶಿಷ್ಯ ವೃದ್ಧ ಹಲವು ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಂಡು ಅವರ ಭವಿಷ್ಯದ ಬದುಕಿಗೆ ಬೆಳಕಾಗಿದ್ದಾರೆ.

ಇವರ ವಿರಚಿತ ನನ್ನ ಕವಿತೆ ನಿನ್ನ ಗೀತೆ ಹಾಡುಗಳಿಗೆ ಡಾ.ಸಂಪದಾ ಭಟ್, ಎನ್.ಎಸ್.ಪ್ರಸಾದ್ , ಗಂಗೋತ್ರಿ ರಂಗಸ್ವಾಮಿ, ಹೇಮಂತ್, ಯಶವಂತ್ ಹಳಿಬಂಡಿ, ಎಸ್.ನಂದಿತಾ, ಡಾ.ಶಮಿತಾ ಮಲ್ನಾಡ್ ರಂತಹ ದೊಡ್ಡ ದೊಡ್ಡ ಗಾಯಕರು ಹಾಡಿ ಕೆಂಪೇಗೌಡರ ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ 2021ರ ಡಿ.31ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇವರು ಶಿಕ್ಷಣ, ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡಿ, ಹಲವು ಪ್ರಶಸ್ತಿಗಳು ಲಭಿಸಲಿ ಎಂಬುದು ಇವರ ಶಿಷ್ಯ ವೃಂದದ ಆಶಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’