ದುರ್ಗಾಕುಮಾರ್ ನಾಯರ್ ಕೆರೆ
ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಯು.ಡಿ.ಎಫ್. ಅಲೆ ಬೀಸಿದ್ದು ನೂರಕ್ಕೂ ಅಧಿಕ ಸ್ಥಾನ ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಕಾಸರಗೋಡು ಜಿಲ್ಲೆಯಲ್ಲೂ ಯು.ಡಿ.ಎಫ್. ಅಲೆ ಬೀಸಿದ್ದು, ತನ್ನ ತೆಕ್ಕೆಯಲ್ಲಿದ್ದ ಮಂಜೇಶ್ವರ, ಕಾಸರಗೋಡು ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜತೆಗೆ ಹಲವು ದಶಕದ ಬಳಿಕ ಉದುಮ ಮತ್ತು ತ್ರಿಕ್ಕರಿಪುರ ಕ್ಷೇತ್ರದಲ್ಲೂ ವಿಜಯಿಯಾಗಿದೆ. ಕಾಞಂಗಾಡ್ ಕ್ಷೇತ್ರ ಮಾತ್ರ ಎಲ್.ಡಿ.ಎಫ್. ಪಾಲಾಗಿದೆ.ಮಂಜೇಶ್ವರ: ಪ್ರತಿಷ್ಠಿತ ಕಣವಾಗಿದ್ದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಿನ ಪೈಪೋಟಿಯಲ್ಲಿ ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ಗೆಲವು ಸಾಧಿಸಿದ್ದಾರೆ. ಯುಡಿಎಫ್ ಭಾಗವಾಗಿರುವ ಇಂಡಿಯನ್ ಮುಸ್ಲಿಂ ಲೀಗ್ ನ ಅಶ್ರಫ್ ಅವರು ಎನ್.ಡಿ.ಎ. ಭಾಗವಾಗಿರುವ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು 29252 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಕಾಸರಗೋಡು: ಕಾಸರಗೋಡು ವಿಧಾನ ಸಭಾ ಕ್ಷೇತ್ರವನ್ನು ಯು.ಡಿ.ಎಫ್. ಭಾಗವಾಗಿರುವ ಇಂಡಿಯನ್ ಮುಸ್ಲಿಂ ಲೀಗ್ ಉಳಿಸಿಕೊಂಡಿದೆ. ಹೊಸ ಮುಖ ಕಲ್ಲಟ್ರ ಮಾಹಿನ್ ಹಾಜಿಯವರು ಎನ್.ಡಿ. ಎ. ಭಾಗವಾಗಿರುವ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರನ್ನು 22689 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.ಉದುಮ: ಉದುಮ ವಿಧಾನ ಸಭಾ ಕ್ಷೇತ್ರವನ್ನು 40 ವರ್ಷಗಳ ಬಳಿಕ ಯು.ಡಿ.ಎಫ್. ತೆಕ್ಕೆಗೆ ತೆಗೆದುಕೊಂಡಿದೆ. ಎಲ್. ಡಿ.ಎಫ್. ಭಾಗವಾಗಿರುವ ಸಿಪಿಎಂ ಅಭ್ಯರ್ಥಿ, ಹಾಲಿ ಶಾಸಕ ಸಿ.ಎಚ್. ಕುಂಞಂಬು ಅವರನ್ನು ಯು.ಡಿ.ಎಫ್. ಭಾಗವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಕೆ. ನೀಲಕಂಠನ್ ಅವರು 4847 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ತ್ರಿಕ್ಕರಿಪುರ: ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರವನ್ನು ಕೂಡಾ ಎಲ್.ಡಿ.ಎಫ್. ಕೈಯಿಂದ ಬರೋಬ್ಬರಿ 66 ವರ್ಷಗಳ ಬಳಿಕ ಯುಡಿ.ಎಫ್. ಕಸಿದುಕೊಂಡಿದೆ. . ಸಿಪಿಎಂನ ವಿ.ಪಿ.ಪಿ. ಮುಸ್ತಾಫ ಅವರನ್ನು ಕಾಂಗ್ರೆಸ್ ನ ಸಂದೀಪ್ ವಾರ್ಯರ್ ಅವರು 4431 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಪರಾಭವಗೊಂಡಿದ್ದಾರೆ. ಕಳೆದ ಚುನಾವಣೆಗಳಲ್ಲಿ ಅಲ್ಪ ಮತಗಳ ಅಂತರದಲ್ಲಿ ( 845 ಮತ್ತು 89 ) ಪರಾಭವ ಕಾಣುತ್ತಿದ್ದ ಸುರೇಂದ್ರನ್ ಈ ಸಲ ಬಾರೀ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.ಯುಡಿಎಫ್ ಅಲೆಯಲ್ಲಿ ಕೊಚ್ಚಿಹೋದ ಎಲ್ಡಿಎಫ್, ಎನ್ಡಿಎಕಾಸರಗೋಡು ಜಿಲ್ಲೆಯ ಮಟ್ಟಿಗೆ ಈ ಚುನಾವಣೆಯಲ್ಲಿ ಯು.ಡಿ.ಎಫ್. ಅಧಿಕಾರಯುತ ಜಯ ಪಡೆದಿದೆ. ಆಡಳಿತ ವಿರೋಧಿ ಅಲೆಗೆ ಎಲ್.ಡಿ.ಎಫ್. ಹೀನಾಯ ಸೋಲು ಕಂಡರೆ, ಎನ್.ಡಿ.ಎ. ಕೂಡಾ ಭಾರೀ ಅಂತರದಲ್ಲಿ ಸೋತಿದೆ.
ತ್ರಿಕ್ಕರಿಪುರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ಇಲ್ಲಿ ಯುಡಿಎಫ್ ವಿಜಯಿಯಾಗಿರಲಿಲ್ಲ. ಈ ಹಿಂದಿನ ನೀಲೇಶ್ವರ ಕ್ಷೇತ್ರ ಇರುವಾಗ 1960 ರಲ್ಲಿ ಕಾಂಗ್ರೆಸ್ ಗೆದ್ದದ್ದೇ ಕೊನೆ. 66 ವರ್ಷಗಳ ಬಳಿಕ ಇಲ್ಲಿ ಕಾಂಗ್ರೆಸ್ ಗೆಲುವಾಗಿದ್ದು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಸಂದೀಪ್ ವಾರ್ಯರ್ ವಿಜಯವಾಗಿದೆ. 40 ವರ್ಷಗಳ ಬಳಿಕ ಉದುಮ ಕ್ಷೇತ್ರದಲ್ಲಿ ಯುಡಿಎಫ್ ಗೆಲುವಾಗಿದೆ.ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಬಿಜೆಪಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಾಣುತ್ತಿದ್ದರೆ, ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಅಂತರ 22 ಸಾವಿರಕ್ಕೂ ಹೆಚ್ಚಿದೆ.ಮಂಜೇಶ್ವರ 29252
ಕಾಞಂಗಾಂಡ್ - 15316
ತೃಕ್ಕರಿಪುರ - 4431