ಕನ್ನಡಪ್ರಭ ವಾರ್ತೆ, ಕಡೂರು
ನೂರಾರು ವರ್ಷಗಳಷ್ಟು ಪ್ರಾಚೀನವಾದ ಕೆರೆಸಂತೆಯ ಶ್ರೀಮಹಾಲಕ್ಷ್ಮಿಮತ್ತು ಶ್ರೀ ಜನಾರ್ಧನ ಸ್ವಾಮಿ ದೇವಾಲಯಗಳನ್ನು ರಾಜ್ಯ ಪುರಾತತ್ವ ಇಲಾಖೆಯಿಂದ ಸಂಪೂರ್ಣ ನವೀಕರಿಸಲಾಗಿದ್ದು, ಜನಾರ್ಧನ, ಮಹಾಲಕ್ಷ್ಮಿ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು.
ದೇವಿಗೆ ಮೀಸಲು, ಬಾಗಿನ ಸಮರ್ಪಣೆ ಮುಂತಾದ ಸಾಂಪ್ರದಾಯಿಕವಾದ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಮಹಾಲಕ್ಷ್ಮಿ ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತಂದು ನೂತನವಾಗಿ ನಿರ್ಮಿಸಲಾಗಿರುವ ಆಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಶಾಸಕ ಕೆ.ಎಸ್.ಆನಂದ್ ತಾಲೂಕಿನ ಜನತೆ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿ, ಬಲಿ ಪೂಜೆ ನೆರವೇರಿದ ಬಳಿಕ ನೆರೆದ ಭಕ್ತರು ಉತ್ಸಾಹದಿಂದ ರಥ ಎಳೆದು ಸಂಭ್ರಮಿಸಿದರು. ಗ್ರಾಮೀಣ ಭಾಗದ ಜನರು ರಥಕ್ಕೆ ಬಾಳೆಹಣ್ಣು, ಎಳನೀರು, ಕಾಯಿ ಸಮರ್ಪಿಸಿದರು. ಗೊರವಯ್ಯಗಳ ಜಾನಪದ ಶೈಲಿಯ ಪೂಜೆ ಗಮನ ಸೆಳೆಯಿತು. ಶ್ರೀ ಅಮ್ಮನವರ ನೂರಾರು ವಕ್ಕಲುಗಳ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಹೊರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನ ಸಮಿತಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿತ್ತು. ಕಡೂರು ಪೊಲೀಸ್ ಠಾಣೆ ಪಿಎಸೈ ಪವನ್ ಕುಮಾರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
15ಕೆಕೆಡಿಯು1.
ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆರೆಸಂತೆ ಮಹಾಲಕ್ಷ್ಮಿಅಮ್ಮನವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.