ಭಂಕೂರ ಗ್ರಾಮದಲ್ಲಿ ದಿಬ್ಬದಿಂದ ಇಳಿದ ಕೆರೆಯಮ್ಮಾ ದೇವಿ ಬಂಡಿ

KannadaprabhaNewsNetwork |  
Published : Jun 24, 2024, 01:30 AM IST

ಸಾರಾಂಶ

ಕಾರಹುಣ್ಣಿಮೆ ಕರಿ ನಿಮಿತ್ತ ಗ್ರಾಮದೇವತೆ ಕೆರೆಯಮ್ಮಾ ದೇವಿ ಹೆಸರಿನ ಮೇಲೆ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಬಳಿಕ ಗ್ರಾಮಸ್ಥರು ಹಣ್ಣು, ಕಾಯಿ, ನೈವೇದ್ಯ ಅರ್ಪಣೆ ಮಾಡಿದರು. ನಂತರ ದೇವಿ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಬಾದ

ತಾಲೂಕಿನ ಭಂಕೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಕರಿ ನಿಮಿತ್ತ ಗ್ರಾಮದೇವತೆ ಕೆರೆಯಮ್ಮಾ ದೇವಿ ಹೆಸರಿನ ಮೇಲೆ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ಕೆರೆಯಮ್ಮಾ ದೇವಿ ಮೂಲ ಮೂರ್ತಿಯನ್ನು ದೇವಿಯ ಬಂಡಿಯಲ್ಲಿ ಕಾಗಿಣಾ ನದಿಗೆ ಗಂಗಾಸ್ನಾನಕ್ಕೆ ಕರೆದುಕೊಂಡು ಹೋಗಲಾಯಿತು. ಬೆಳಗ್ಗೆ 4 ಗಂಟೆಗೆ ಗ್ರಾಮದ ಮುಖ್ಯದ್ವಾರಕ್ಕೆ ದೇವಿಯ ಮೂರ್ತಿಯನ್ನು ನದಿಯಿಂದ ಕರೆ ತರಲಾಯಿತು. ಅಲ್ಲಿ ಗ್ರಾಮಸ್ಥರು ಹಣ್ಣು, ಕಾಯಿ, ನೈವೇದ್ಯ ಅರ್ಪಣೆ ಮಾಡಿದರು. ನಂತರ ದೇವಿ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು.

ಗ್ರಾಮದ ಅಂಕಲಮ್ಮಾ ದೇವ ದೇವಸ್ಥಾನದ ಬಳಿ ದೇವಿ ಬಂಡಿಗೆ ಬಿಳಿ ಬಟ್ಟೆ, ಬೇವಿನ ಸೊಪ್ಪಿನಿಂದ ಶೃಂಗರಿಸಲಾಯಿತು. ವಿವಿಧ ವಾದ್ಯ ವೃಂದದೊಂದಿಗೆ ಕುಂಭ ಪೂಜೆ ನಡೆದ ನಂತರ, ಗ್ರಾಮದ ದತ್ತಾತ್ರೇಯ ಕುಲಕರ್ಣಿ ತಳವಾರರ ಮನೆಯಿಂದ ತಂದು ಕೊಟ್ಟ ಖಡ್ಗ ಹಿಡಿದು ಬಂಡಿ ಏರಿದರು. ಶಂಕರಗೌಡ ಮಜ್ಜಿಗಿಯವರ ಬಾರಕೋಲು ಹಿಡಿದು ಬಂಡಿಯ ಸಾರಥ್ಯ ವಹಿಸಿದರು.

ಸಂಜೆ ಬಂಡಿ ಕರೆಯಮ್ಮಾ ದೇವಿ ದೇವಸ್ಥಾನಕ್ಕೆ ಬಂದ ನಂತರ, ದತ್ತಾತ್ರೇಯ ಕುಲಕರ್ಣಿ, ಶಂಕರಗೌಡ ಮಜ್ಜಿಗೆ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಂಡಿಗೆ ಮುಖ್ಯ ಎತ್ತುಗಳಾದ ಮಾಲಿಪಾಟೀಲ ಅವರ ಎತ್ತುಗಳನ್ನು ಹೂಡಲಾಯಿತು. ನಂತರ ಎತ್ತರ ದಿಬ್ಬ ಏರಿದ ಬಂಡಿ, ಭಕ್ತರ ಜಯಘೋಷ, ವಾದ್ಯ ವೃಂದದೊಂದಿಗೆ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ರಾತ್ರಿ 8 ಗಂಟೆಗೆ ಮುಖ್ಯದ್ವಾರಕ್ಕೆ ಕಟ್ಟಿದ್ದ ಕರಿ (ಬೇವಿನ ಎಲೆಗಳು)ಯನ್ನು ಓಡುತ್ತಿರುವ ಬಂಡಿಯಿಂದಲೇ ಖಡ್ಗ ಹಿಡಿದ ಕುಲಕರ್ಣಿ ಕರಿಯನ್ನು ಹರಿಯುವ ಮೂಲಕ ಕಾರ ಹುಣ್ಣಿಮೆ ಭಂಕೂರ ಕರಿ ಸಂಪನ್ನಗೊಂಡಿತು.

ಗ್ರಾಮದೇವತೆ ಈ ಜಾತ್ರೆಗೆ ದಲಿತರು ಅರ್ಚಕರಾಗಿ, ತಳವಾರರ ಖಡ್ಗ ನೀಡಿ, ಬಂಡಿಗೆ ಹೂಡಿದ ಎತ್ತುಗಳ ನಿಯಂತ್ರಣ ಕೆಲಸವನ್ನು, ಪೂಜಾರಿ ಸಮಾಜದವರು ಬಲಿ ಅರ್ಪಿಸುವ ಕೆಲಸವನ್ನು ಮಾಲಿ ಗೌಡರು ಎತ್ತುಗಳನ್ನು ಒದಗಿಸಿದರು. ಮಾನಕರ ಕುಟುಂಬಸ್ಥರು ಕರಿ ಹಗ್ಗ ಒದಗಿಸುವ, ಕರಿ ಹರಿದವರಿಗೆ ಗೌರವಿಸುವ ಕೆಲಸನ್ನು ಮಾಡಿದರು.

ಭಂಕೂರ ಕರಿ ಕಾರ್ಯಕ್ರಮದಲ್ಲಿ ಮುಖಂಡರಾದ ಚನ್ನವೀರಪ್ಪ ಮಾಲಿ ಪಾಟೀಲ, ಶಶಿಕಾಂತ ಪಾಟೀಲ, ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ, ನೀಲಕಂಠ ಪಾಟೀಲ, ವಿಜಯಕಾಂತ ಪಾಟೀಲ, ಈರಣ್ಣಾ ಕಾರ್ಗಿಲ, ಅಮೃತ ಮಾನಕರ, ಅಮೃತ ಘಟ್ಟದ, ಲಕ್ಷ್ಮೀಕಾಂತ ಕಂದಗೋಳ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌