ಅಪಹರಣಗೈದು ₹5 ಕೋಟಿ ಬೇಡಿಕೆ ಇಟ್ಟಿದ್ದವರೇ ವೈದ್ಯನಿಗೆ ₹300 ಕೊಟ್ಟು ಹೋದ್ರು

KannadaprabhaNewsNetwork |  
Published : Jan 27, 2025, 12:45 AM IST
ಸ | Kannada Prabha

ಸಾರಾಂಶ

ವೈದ್ಯನ ಅಪಹರಣ ಮಾಡಿದವರ ಹುಡುಕಾಟ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ

ಬಳ್ಳಾರಿ: ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ₹5 ಕೋಟಿ ಬೇಡಿಕೆ ಇಟ್ಟಿದ್ದ ಅಪಹರಣಕಾರರೇ ವೈದ್ಯನನ್ನು ಶನಿವಾರ ಸಂಜೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಬಿಟ್ಟು ₹300 ಕೊಟ್ಟು ತೆರಳಿದ ಘಟನೆ ವರದಿಯಾಗಿದೆ.

ನಗರದ ಎಸ್‌ಎನ್‌ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ವಾಕಿಂಗ್‌ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಪಿ.ಸುನೀಲಕುಮಾರ್‌ ಅವರನ್ನು ಕಾರ್‌ವೊಂದರಲ್ಲಿ ಬಂದ ಆಗಂತುಕರು ಅಪಹರಣ ಮಾಡಿದ್ದರು. ಬಳಿಕ ವೈದ್ಯನ ಸಹೋದರನಿಗೆ ಕರೆ ಮಾಡಿ ₹5 ಕೋಟಿಗೆ ಬೇಡಿಕೆ ಇಟ್ಟು ಹಣ ನೀಡಿದರೆ ಮಾತ್ರ ಬಿಡುವುದಾಗಿ ಬೆದರಿಕೆ ಹಾಕಲಾಗಿತ್ತು. ಹೀಗೆ ಕೋಟ್ಯಂತರ ರುಪಾಯಿಗೆ ಬೇಡಿಕೆ ಇಟ್ಟ ಅಪಹರಣಕಾರರ ಗುಂಪು ವೈದ್ಯನಿಗೆ ವಾಪಸ್‌ ₹300 ಕೊಟ್ಟು, ಬಸ್‌ ಹತ್ತಿ ಮನೆಗೆ ಸೇರುವಂತೆ ತಿಳಿಸಿದ್ದಾರೆ.

ಈ ಕುರಿತು ಎಸ್ಪಿ ಡಾ.ಶೋಭಾರಾಣಿ ಮಾತನಾಡಿ, ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಅಲರ್ಟ್‌ ಆಗಿತ್ತು. ನಗರದ ಎಲ್ಲ ಭಾಗಗಳಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ, ಅಪಹರಣಕಾರರು ಬಳಸಿದ ಕಾರ್‌ ಕುರಿತು ಪರಿಶೀಲನೆ ನಡೆಸಲು ಮುಂದಾಗಿತ್ತು. ಜಿಲ್ಲೆ ಬಿಟ್ಟು ಹೊರ ತೆರಳದಂತೆ ಅಂತರ್‌ ಜಿಲ್ಲಾ, ರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನಗಳ ತಪಾಸಣೆ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಅಲ್ಲದೆ, ಒಳ ರಸ್ತೆಗಳಲ್ಲಿ ಬೈಕ್‌ ಮೂಲಕ ನಿರಂತರ ಪೆಟ್ರೊಲಿಂಗ್‌ ಕಾರ್ಯ ಸಹ ನಡೆಸಲಾಗಿತ್ತು. ಹೀಗಾಗಿ, ಅಪಹರಣಕಾರರಿಗೆ ಬೇರೆ ದಾರಿಯಿಲ್ಲದೇ ವೈದ್ಯನನ್ನು ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ಶನಿವಾರ ರಾತ್ರಿ 9ಕ್ಕೆ ಸುರಕ್ಷಿತವಾಗಿ ಬಿಟ್ಟು ತೆರಳಿದ್ದಾರೆ. ಈ ವೇಳೆ ಅಪಹರಣಕಾರರೇ ನಮಗೆ ಹಣ ಬೇಡ, ನೀನೇ ಈ ₹300 ತೆಗೆದುಕೊಂಡು ಬಸ್‌ ಹತ್ತಿ ಮನೆ ಸೇರು ಎಂದು ಹೇಳಿದ್ದಾರೆ. ಬಳಿಕ ವೈದ್ಯ ಸುನೀಲಕುಮಾರ್‌ ಸ್ಥಳೀಯ ಮೊಬೈಲ್‌ನಿಂದ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ವೈದ್ಯನ ಮೊಬೈಲ್‌ ನಾಪತ್ತೆಯಾಗಿದೆ. ವೈದ್ಯನ ಅಪಹರಣ ಮಾಡಿದವರ ಹುಡುಕಾಟ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!