ಕನ್ನಡಪ್ರಭ ವಾರ್ತೆ ಮೂಲ್ಕಿ
ಅವ್ಯವಸ್ತೆಯ ಆಗರವಾಗಿರುವ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಬಿತ್ತುಲ್ ದ್ರವ ತ್ಯಾಜ್ಯ ಘಟಕಕ್ಕೆ ದ.ಕ. ಜಿಲ್ಲಾ ಉಪ ಪರಿಸರ ಅಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಅದಿಕಾರಿ ಭೇಟಿ ನೀಡಿ ಪರಿಶೀಲಿಸಿದರು.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ನಲ್ಲಿ ಸ್ಥಾಪಿಸಿರುವ ಘಟಕ ತೀರಾ ಅವೈಜ್ಞಾನಿಕವಾಗಿದ್ದು ಈ ಘಟಕದ ಪರಿಸರದ ಬಾವಿಯ ನೀರು ತನಿಖೆ ನಡೆಸಿ ವರದಿ ಮಾಡಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರೀ ಹೇಳಿದರು.
ಈಗಾಗಲೇ ಅಂಗಡಿ, ಹೊಟೇಲ್ನವರು ದಾವೆ ಹೂಡಿದ್ದು ಅದರಿಂದ ಕೂಡಲೇ ತ್ಯಾಜ್ಯ ಘಟಕ ನಿಲ್ಲಿಸುವಂತೆ ಮಾಡಲಾಗುವುದಿಲ್ಲ , ಇಲ್ಲಿನ ಜನರ ಹಾಗೂ ನೀರಿನ ಪರೀಕ್ಷ ಹಾಗೂ ಪಟ್ಟಣ ಪಂಚಾಯಿತಿ ವರದಿ ನೋಡಿ ಕೂಡಲೇ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು, ಮುಂದಕ್ಕೆ ಇಂತಹ ಘಟನೆ ನಡೆದರೆ ಕ್ರಿಮಿನಲ್ ದಾವೆ ಹೂಡಲಾಗುವುದು ಎಂದು ಹೇಳಿದರು.ನಗರಾಭಿವೃದ್ಧಿ ಕೋಶದ ಅಧಿಕಾರಿ ಜಯಲಕ್ಷ್ಮೀ ಬಿತ್ತುಲ್ ಪರಿಸರದ ಘಟಕ ಹಾಗೂ ಅಲ್ಲಿನ ಬಾವಿಗಳನ್ನು ವೀಕ್ಷಿಸಿ ಮಾತನಾಡಿ, ಜನರ ಕಷ್ಟ ಅರ್ಥವಾಗುತ್ತಿದೆ. ಬಿತ್ತುಲ್ ಘಟಕ ಸರ್ಕಾರದ ಅದಿಕಾರಿಗಳ ಮೂಲಕ ಫಲಕ ಹಾಕಲಾಗಿದೆ. ಆದುದರಿಂದ ಇದರ ಬಗ್ಗೆ ಗ್ರಾಮ ಪಂಚಾಯಿತಿ ವರದಿ ಹೇಗಿದೆ ಎಂದು ಪರಿಶೀಲನೆ ಮಾಡಿ ಸಮಗ್ರ ವರದಿ ತಯಾರಿಸಲಾಗುವುದು. ಹೊಟೇಲ್ ಮಾಲಕರು ಹಾಕಲಾಗಿದ್ದ ಕೇಸ್ ತೆರವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶಂಕರ್, ಗ್ರಾಮಸ್ಥರಾದ ವಿಲ್ಸನ್ ಡಿಸೋಜ, ಪ್ಲೆವೀ ಅಬ್ರಾವೋ, ಕಮಲಾಕ್ಷಿ , ಭರತ್ರಾಜ್ ಡೊನಾಲ್ಡ್ ಡಿಸೋಜ, ಸ್ಟ್ಯಾನಿ ಪಿಂಟೋ, ಪ್ರನೀಕ್, ಉದಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.