ಕೃತಕ ಬುದ್ಧಿಮತ್ತೆಯ ಜಮಾನದಲ್ಲಿ ಜ್ಞಾನಕ್ಕೆ ಹೆಚ್ಚು ಮನ್ನಣೆ: ವಚನಾನಂದ ಸ್ವಾಮೀಜಿ

KannadaprabhaNewsNetwork |  
Published : Aug 20, 2025, 02:00 AM IST
ಹೂವಿನಹಡಗಲಿಯ ಪಂಚಮಸಾಲಿ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಇತರರು.ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಎಂದು ತಲೆಕೆಡಿಸಿಕೊಳ್ಳಬಾರದು, ಕೃತಕ ಬುದ್ಧಿಮತ್ತೆಯ ಜಮಾನದಲ್ಲಿ ಅಂಕಕ್ಕಿಂತ ಜ್ಞಾನಕ್ಕೆ ಹೆಚ್ಚು ಬೆಲೆ ಇದೆ ಎಂಬುದನ್ನು ಅರಿಯಬೇಕು.

ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಎಂದು ತಲೆಕೆಡಿಸಿಕೊಳ್ಳಬಾರದು, ಕೃತಕ ಬುದ್ಧಿಮತ್ತೆಯ ಜಮಾನದಲ್ಲಿ ಅಂಕಕ್ಕಿಂತ ಜ್ಞಾನಕ್ಕೆ ಹೆಚ್ಚು ಬೆಲೆ ಇದೆ ಎಂಬುದನ್ನು ಅರಿಯಬೇಕೆಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಪಂಚಮಸಾಲಿ ಭವನದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘ ಆಯೋಜಿಸಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಕ್ಕಳಿಗೆ ಜ್ಞಾನಾರ್ಜನೆಯ ಜತೆಗೆ ಧಾರ್ಮಿಕ ಸಂಸ್ಕಾರ ನೀಡಬೇಕಿದೆ ಎಂದರು.

ವಿದ್ಯಾರ್ಥಿಗಳು ನಿರಂತರ ಪರಿಶ್ರಮಪಟ್ಟು ಅಭ್ಯಾಸ ಮಾಡಿದಾಗ, ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಮಕ್ಕಳು ತಂದೆ-ತಾಯಿ, ಗುರುಗಳನ್ನು ಆದರ್ಶವಾಗಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಬೇಕೆಂದು ಹೇಳಿದರು.

ಸಮಾಜದ ಗುರುಹಿರಿಯರು ಭಿನ್ನಾಭಿಪ್ರಾಯ ಮರೆತು ಸಂಘಟನೆಗೆ ಕೈಜೋಡಿಸಬೇಕು. ಆಂತರಿಕವಾಗಿ ಪರಿವರ್ತನೆಗೊಂಡಾಗ ಬದಲಾವಣೆ ಖಂಡಿತ ಸಾಧ್ಯ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹತ್ತು ಹಲವಾರು ಹೋರಾಟ ಮಾಡುವ ಜತೆಗೆ ಪಾದಯಾತ್ರೆ ಮಾಡಿದ್ದರೂ, ಎಲ್ಲ ಸರ್ಕಾರಗಳು ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿವೆ. ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಸಮಾಜವನ್ನು ಜಾಗೃತಗೊಳಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಸಮಾಜದ 25 ಜನ ಶಾಸಕರು ಆಯ್ಕೆಯಾಗುವಂತೆ ರಾಜಕೀಯ ಪ್ರಜ್ಞೆ ಮೂಡಿಸುತ್ತೇವೆಂದರು.

ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾ ವಿಜಯ್ ಮಾತನಾಡಿ, ಪಂಚಮಸಾಲಿ ಸಮಾಜದ ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಆರಂಭಿಸುವ ಅಗತ್ಯವಿದೆ. ಸಮಾಜದ ಹಿರಿಯರು ಪ್ರಯತ್ನಿಸಿದರೆ ನಾವೂ ಸಹಕಾರ ನೀಡುತ್ತೇವೆಂದು ಹೇಳಿದರು.

ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ರಾಕೇಶಯ್ಯ ರಾಮಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರವಿ ಉತ್ತಂಗಿ, ಯುವ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ, ಅಂಗಡಿ ವೀರಣ್ಣ ಮಾತನಾಡಿದರು. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಬಿ. ಜಗದೀಶ ಅಧ್ಯಕ್ಷತೆ ವಹಿಸಿದ್ದರು.

ಪಂಚಮಸಾಲಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ್, ತಾಲೂಕ ಘಟಕದ ಅಧ್ಯಕ್ಷ ಕೆ.ಎಸ್. ಶಾಂತನಗೌಡ, ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಟಿ.ಕೆ. ಬ್ಯಾಡಗಿ, ವಿಜಯಕುಮಾರ್ ಪಾಟೀಲ್, ಎಚ್.ಜಿ. ಪಾಟೀಲ್, ಎಂ.ವಿ. ಪಾಟೀಲ್, ಪರಶೆಟ್ಟಿ ಕೇಶಪ್ಪ, ನಾಗಭೂಷಣ ಮಲ್ಕಿಒಡೆಯರ್, ಎಂ.ಬಿ. ಬಸವರಾಜ, ಕೆ.ಪತ್ರೇಶ, ಓಲಿ ಈಶಪ್ಪ, ಗಡ್ಡಿ ಪತ್ರೆಪ್ಪ, ಸೊಪ್ಪಿನ ಪ್ರಕಾಶ್, ಬಿ.ಬಿ. ಅಸುಂಡಿ, ಹಕ್ಕಂಡಿ ಶಿವನಾಗಪ್ಪ, ಕಣದಾಳ ಶಂಕ್ರಪ್ಪ, ಅಕ್ಕಮಹಾದೇವಿ ಇತರರಿದ್ದರು. ನೌಕರರ ಸಂಘದ ಗೌರವಾಧ್ಯಕ್ಷ ಬಸೆಟ್ಟಿ ಪ್ರಕಾಶ್, ಶಿವಕುಮಾರ್, ಕೆ.ಪ್ರಕಾಶ್, ಎಚ್.ಕೆ. ಮಹೇಶ ನಿರ್ವಹಿಸಿದರು.ಮಕ್ಕಳ ಭವಿಷ್ಯ ಹಾಳು ಮಾಡಬೇಡಿ

ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವ ಜತೆಗೆ ಮಾರ್ಗದರ್ಶನ ಅಗತ್ಯವಿದೆ. ಸಮಾಜ ಸಂಘಟನೆಯ ವಿಚಾರದಲ್ಲಿ ಕೀಳು ರಾಜಕೀಯವನ್ನು ಬೆರೆಸಿ ಮಕ್ಕಳ ಭವಿಷ್ಯ ಹಾಳು ಮಾಡಬಾರದು ಎಂದು ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.

ಸಮಾಜ ಸಂಘಟನೆಯಲ್ಲಿ ರಾಜಕೀಯ ಬೆರಸಬೇಡಿ, ಪಕ್ಷ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಲಿ. ಸಮಾಜಕ್ಕೆ ದ್ರೋಹ ಮಾಡುವವರನ್ನು ಕ್ಷಮಿಸುವುದಿಲ್ಲ. ಮುಂದಿನ ತಿಂಗಳು ತಾಲೂಕಿನಲ್ಲಿ ಐದು ದಿನ ಪ್ರವಾಸ ಮಾಡಿ ಒಗ್ಗೂಡಿಸಿ ಸಂಘಟನೆಗೆ ಹೊಸ ರೂಪ ನೀಡುತ್ತೇವೆ ಎಂದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ