ಕೋಲಾರ ನಗರೋತ್ಥಾನ ಕಾಮಗಾರಿಗೆ ಗ್ರಹಣ

KannadaprabhaNewsNetwork | Published : May 26, 2025 12:31 AM
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (೪ನೇ ಹಂತ) ಕೋಲಾರ ನಗರಸಭೆಯಲ್ಲಿ ೧೭.೨೬ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿಯ ಅವಧಿ ಮುಗಿದು ೯ ತಿಂಗಳಾದರೂ ಶೇ.೩೦ ಕೆಲಸ ಮುಗಿದಿಲ್ಲ. ಇತ್ತ ನಗರಸಭೆಯಿಂದ ಯಾವುದೇ ಕ್ರಮ ಆಗಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (೪ನೇ ಹಂತ) ಕೋಲಾರ ನಗರಸಭೆಯಲ್ಲಿ ೧೭.೨೬ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿಯ ಅವಧಿ ಮುಗಿದು ೯ ತಿಂಗಳಾದರೂ ಶೇ.೩೦ ಕೆಲಸ ಮುಗಿದಿಲ್ಲ. ಇತ್ತ ನಗರಸಭೆಯಿಂದ ಯಾವುದೇ ಕ್ರಮ ಆಗಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಕೇವಲ ಪತ್ರ ವ್ಯವಹಾರವಷ್ಟೇ ನಡೆಯುತ್ತಿದ್ದು, ನಗರೋತ್ಥಾನ ಕಾಮಗಾರಿಗೆ ಗ್ರಹಣ ಬಡಿದಿದೆ. ಅರ್ಧಂಬರ್ಧ ಕಾಮಗಾರಿ ನಡೆದಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ. ಈ ಬಗ್ಗೆ ಜಯನಗರ ವಾರ್ಡ್‌ನ ಎಸ್.ಆರ್.ಮುರಳಿಗೌಡ ಸೇರಿದಂತೆ ನಗರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.೩೫ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಸಂಬಂಧ ೨೦೨೩ರ ಫೆಬ್ರುವರಿ ೨೦ರಂದು ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿಗೆ ಮಾರ್ಚ್ ೧೬ರಂದು ಅಂದಿನ ಶಾಸಕ ಕೆ.ಶ್ರೀನಿವಾಸಗೌಡ, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಗಾಂಧಿವನದ ಸಮೀಪ ಚಾಲನೆ ನೀಡಿದ್ದರು.೨೦೨೪ರ ಆಗಸ್ಟ್ ೧೯ರೊಳಗೆ ಅಂದರೆ ೧೮ ತಿಂಗಳ ಅವಧಿಯಲ್ಲಿ ಶೇ.೧೦೦ರಷ್ಟು ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿತ್ತು. ಆದರೆ ಗಡುವು ಮುಗಿದು ೯ ತಿಂಗಳು ಕಳೆದಿದ್ದು, ಶೇ.೩೦ ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಅನೇಕ ಬಾರಿ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ.ಈ ಯೋಜನೆಯಡಿ ಗುತ್ತಿಗೆದಾರರು ಕೈಗೊಳ್ಳದೇ ಇರುವ ಬಾಕಿ ಕಾಮಗಾರಿಗಳಿಗೆ ಹೊಸದಾಗಿ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ ಕೋಲಾರ ನಗರಸಭೆ ಪೌರಾಯುಕ್ತ ಪ್ರಸಾದ್ ಅವರಿಗೆ ಕಳೆದ ತಿಂಗಳು ಪತ್ರ ಕೂಡ ಬರೆದಿದ್ದಾರೆ. ಇದಲ್ಲದೇ, ನಿಗದಿಪಡಿಸಿದ ೧೮ ತಿಂಗಳ ಅವಧಿ ಮುಗಿಯುತ್ತಿದ್ದಂತೆ ಟೆಂಡರ್ ರದ್ದುಪಡಿಸಲು ಎರಡು ನೋಟಿಸ್ ಕೂಡ ನೀಡಲಾಗಿದೆ. ಹೆಚ್ಚುವರಿ ಕಾಲಾವಕಾಶ ನೀಡಿ ೨೦೨೪ರ ಡಿಸೆಂಬರ್ ೧೪ರೊಳಗೆ ಕಾಮಗಾರಿ ಮುಗಿಸದಿದ್ದರೆ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಪೌರಾಯುಕ್ತ ಕೂಡ ಪತ್ರ ಬರೆದಿದ್ದಾರೆ.ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (೪ನೇ ಹಂತ) ಕೋಲಾರ ನಗರಸಭೆಗೆ ವಿವಿಧ ಕಾಮಗಾರಿಗಳಿಗೆ ಒಟ್ಟು ೩೪ ಕೋಟಿ ರು. ಕ್ರಿಯಾ ಯೋಜನೆಗೆ ನಗರೋತ್ಥಾನ ರಾಜ್ಯಮಟ್ಟದ ಸಮಿತಿಯು ೨೦೨೨ರಲ್ಲಿ ಅನುಮೋದನೆ ನೀಡಿತ್ತು. ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಗೆ ಒಟ್ಟು ೧೧೪.೭೫ ಕೋಟಿ ರು. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟು ೧೪೫ ಕೋಟಿ ರು. ಅನುದಾನ ಹಂಚಿಕೆಯಾಗಿತ್ತು.ಜಿಲ್ಲೆಯಲ್ಲಿ ಪೌರಾಡಳಿತ ಇಲಾಖೆಯ ಯೋಜನೆಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಏಕರೂಪ್ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಕೊತ್ತೂರು ಮಂಜುನಾಥ್ ಕೂಡ ಸಭೆ ನಡೆಸಿ ಚಾಟಿ ಬೀಸಿದ್ದರು.

ಕಪ್ಪುಪಟ್ಟಿ, ಮುಟ್ಟುಗೋಲಿಗೆ ಪತ್ರ: ಕಾಮಗಾರಿ ಬೇಗನೇ ಮುಗಿಸಲು ಗುತ್ತಿಗೆದಾರರಿಗೆ ಹಲವು ಬಾರಿ ನೋಟಿಸ್, ಸೂಚನೆಯೊಂದಿಗೆ ಹೆಚ್ಚುವರಿ ಕಾಲಾವಕಾಶ ನೀಡಿದರೂ ಕೆಲಸ ಪೂರ್ಣಗೊಂಡಿಲ್ಲ. ಹೀಗಾಗಿ, ಗುತ್ತಿಗೆದಾರರ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ. ಅಲ್ಲದೇ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.