ಶಿರಸಿ: ಲಕ್ಷ್ಮಿನರಸಿಂಹ ರಥೋತ್ಸವ ಸಂದರ್ಭದಲ್ಲಿ ಮೇ ೧೦, ೧೧ರಂದು ಕೃಷಿ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ತಿಳಿಸಿದರು.
ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕಿಮನೆ ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನಾಧೀಶ್ವರ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹುಬ್ಬಳ್ಳಿ ಮೂರು ಸಾವಿರ ಮಠದ ಮನ್ಮಹಾರಾಜ ನಿರಂಜನ ಜ.ಡಾ.ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಕೃಷಿ ಜಯಂತಿ ಉದ್ಘಾಟಿಸಲಿದ್ದಾರೆ.
ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಶೇಖರ ಜೋಶಿ ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ತೀರ್ಥಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ೪ ಗಂಟೆಗೆ ವಿಚಾರಪೂರ್ಣ ಗೋಷ್ಠಿಗಳು ನಡೆಯಲಿದ್ದು, ಮೇ ೧೧ ರಂದು ಬೆಳಗ್ಗೆ ೧೦ ಗಂಟೆಯಿಂದ ವಿವಿಧ ಸ್ಪರ್ಧೆಗಳು, ಪ್ರದರ್ಶನಗಳು ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಇದ್ದರು.ಸ್ವರ್ಣವಲ್ಲಿ ಕೃಷಿ ಪ್ರಶಸ್ತಿ ಪುರಸ್ಕೃತರು:
ಉತ್ತಮ ಕೃಷಿಕ (ಕೃಷಿ ಕಂಠೀರವ)- ಮಹೇಶ ಚಂದ್ರಶೇಖರ ಹೆಗಡೆ ಅರಗಿನಮನೆ, ಸಾಧಕ ಕೃಷಿ ಮಹಿಳೆ-ವೀಣಾ ಮಹಾಬಲೇಶ್ವರ ಹೆಗಡೆ ಹೆಬ್ಳೆಮನೆ, ಉತ್ತಮ ಕೃಷಿ ಅವಿಭಕ್ತ ಕುಟುಂಬ-ಸುಬ್ರಾಯ ವಾಸುದೇವ ದಾನಗೇರಿ, ಸಾಧಕ ಕೃಷಿ ಪೂರಕ ಸಂಸ್ಥೆ- ಪ್ರಗತಿ ಮಿತ್ರ ರೈತ ಉತ್ಪಾದಕ ಕಂಪನಿ, ಬಾಳೆಗದ್ದೆ, ಸಾಧಕ ಕೃಷಿ ಕುಶಲಕರ್ಮಿ-ಗಣಪತಿ ಭೈರವೇಶ್ವರ ಭಟ್ಟ ಕಲ್ಲೇಮನೆ, ಅಚವೆ, ಮಹಾಬಲೇಶ್ವರ ಅನಂತ ಹೆಗಡೆ ಮೆಣಸೇಮನೆ, ವಾನಳ್ಳಿ, ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪುರಸ್ಕೃತರು ಪ್ರಥಮ- ಗಣಪತಿ ವೆಂಕಟರಮಣ ಹೆಗಡೆ ಎಮ್ಮೆನಹೋಂಡಾ, ದ್ವಿತೀಯ- ಬಿ.ಜಿ.ಹೆಗಡೆ ಹೆಗಡೆ ಮತ್ತು ಎನ್.ಜಿ.ಹೆಗಡೆ ಗೇರಾಳ, ದ್ವಿತೀಯ-ಸುಬ್ರಾಯ ಗಜಾನನ ಹೆಗಡೆ ಊರತೋಟ.