ಕೃಷ್ಣರಾಜ ಒಡೆಯರ್ ಆಳ್ವಿಕೆ ದೇಶಕ್ಕೆ ಮಾದರಿ

KannadaprabhaNewsNetwork | Published : Jun 5, 2025 1:10 AM
ಹಿರಿಯೂರು: ರಾಜ್ಯಕ್ಕೆ ಮಾದರಿ ಆಡಳಿತ ನೀಡಿದ ಸಮಾನತೆಯ ಹರಿಕಾರ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ ಈ ದೇಶಕ್ಕೆ ಮಾದರಿ ಎಂದು ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.

ಹಿರಿಯೂರು: ರಾಜ್ಯಕ್ಕೆ ಮಾದರಿ ಆಡಳಿತ ನೀಡಿದ ಸಮಾನತೆಯ ಹರಿಕಾರ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ ಈ ದೇಶಕ್ಕೆ ಮಾದರಿ ಎಂದು ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಮಾಸಿಕ ಸಭೆ ಹಾಗೂ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷ್ಣರಾಜ ಒಡೆಯರ್ ಅವರು ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲೆಯ ಹಿರಿಯೂರು ತಾಲೂಕಿನ ಸಮೀಪ ಮಾರಿ ಕಣಿವೆ ಬಳಿ ವಾಣಿ ವಿಲಾಸ ಜಲಾಶಯ ನಿರ್ಮಿಸುವ ಮೂಲಕ ಜಿಲ್ಲೆಯ ಜನ ಜಾನುವಾರು, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಮತ್ತು ಅನ್ನ ನೀಡಿದರು ಎಂದು ಸ್ಮರಿಸಿದರು.

ಸಿಮೆಂಟು, ಕಬ್ಬಿಣ ಹಾಗೂ ಯಂತ್ರೋಪಕರಣಗಳನ್ನು ಬಳಸದೆ ಕೇವಲ ಗಾರೆಯಿಂದ ಅತ್ಯದ್ಭುತವಾದ 30 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಜಲಾಶಯ ನಿರ್ಮಿಸಿ ರಾಜ್ಯಕ್ಕೆ ಮಾದರಿಯಾದರು. ತಾಲೂಕಿನಲ್ಲಿ ಎಡ ಮತ್ತು ಬಲ ನಾಲೆ ನಿರ್ಮಿಸಿ ಸುಮಾರು 48 ಕಿಮೀ ದೂರದವರೆಗೆ ಅಂತರ್ಜಲ ವೃದ್ಧಿಸುವಂತೆ ಕಲ್ಲು ಕಟ್ಟಡದ ನಾಲೆ ನಿರ್ಮಿಸಿದರು. ಇದಲ್ಲದೆ ರೈಲ್ವೆ ಮಾರ್ಗಗಳು, ಜಲ ವಿದ್ಯುತ್ ಕೇಂದ್ರ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಮಿಂಟೋ ಕಣ್ಣಿನ ಆಸ್ಪತ್ರೆ, ವಿದ್ಯುತ್ ದೀಪಗಳು, ಕೃಷಿ ವಿದ್ಯಾಲಯ , ಕನ್ನಡ ಸಾಹಿತ್ಯ ಪರಿಷತ್ತು ಹಿಂದೂಸ್ತಾನ್ ಏರೋ ಲಿಮಿಟೆಡ್ ಗೆ ಅಡಿಪಾಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮಂಡ್ಯದಲ್ಲಿ ಮೈಸೂರು ಪೇಪರ್ ಮಿಲ್ ಬಣ್ಣ ಮತ್ತು ಅರಗು ಕಾರ್ಖಾನೆ, ಮಹಿಳೆಯರಿಗೆ ಮತದಾನದ ಹಕ್ಕು, ಹಿಂದುಳಿದ ವರ್ಗದವರಿಗೆ ಮೀಸಲಾತಿಯಂತಹ ನೂರಾರು ಸೌಲಭ್ಯಗಳನ್ನು ಜನತೆಗೆ ಒದಗಿಸುವ ಮುಖಾಂತರ ಪಾರದರ್ಶಕ ಆಡಳಿತ ನೀಡಿದರು. ನಮ್ಮನ್ನಾಳುವ ಸರ್ಕಾರಗಳು ಮಹಾರಾಜರ ಆಳ್ವಿಕೆಯ ಮಾದರಿಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.

ಯುವ ಘಟಕದ ಅಧ್ಯಕ್ಷ ಆರ್.ಚೇತನ್ ಮಾತನಾಡಿ, ಕೃಷಿ ಇಲಾಖೆಯಿಂದ ತೊಗರಿ, ಸೂರ್ಯಕಾಂತಿ, ಶೇಂಗಾ, ಅರಳು, ಮೆಕ್ಕೆಜೋಳ ಇತರೆ ಗುಣಮಟ್ಟದ ಬಿತ್ತನೆ ಬೀಜವನ್ನು ವಿತರಿಸಬೇಕು ಹಾಗೂ ರಾಸಾಯನಿಕ ಗೊಬ್ಬರ ಅಂಗಡಿಗಳಲ್ಲಿ ಗೊಬ್ಬರ ಕೊಂಡರೆ ನಿಗದಿತ ಬಿಲ್ಲು ನೀಡದೆ ಬಿಳಿ ಚೀಟಿಯಲ್ಲಿ ಬಿಲ್ ಕೊಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಲ್ಲಿ ಇತ್ತೀಚಿಗೆ ರೈತರಿಗೆ ವಿತರಿಸಿದ ಉಚಿತ ತರಕಾರಿ ಸೊಪ್ಪಿನ ಬೀಜದಲ್ಲಿ ಕೇವಲ ಸೊಪ್ಪಿನ ಬೀಜ ಮಾತ್ರ ಇದ್ದು ತರಕಾರಿ ಬೀಜಗಳ ಫೋಟೋ ಮಾತ್ರ ಚೀಲದ ಮುಂಭಾಗ ನಮೂದಾಗಿದ್ದು ಯಾವುದೇ ತರಕಾರಿ ಬೀಜಗಳು ಕಿಟ್‌ನಲ್ಲಿ ಇಲ್ಲ. ಮೊದಲು ರೈತರಿಗೆ ಗುಣಮಟ್ಟದ ಹಣ್ಣು ಮತ್ತು ತರಕಾರಿ ಬೀಜವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮಿಕಾಂತ್ ಮಾತನಾಡಿ, ಕಳೆದ ವಾರ ಜಿಲ್ಲೆಯಲ್ಲಿ ಎಲ್ಲೋ ಸ್ಕ್ವಾಡ್ ಬಂದಿತೆಂದು ನಗರದಲ್ಲಿರುವ ಎಲ್ಲಾ ರಾಸಾಯನಿಕ ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮಾರಾಟ ಮಾಡುವ ಅಂಗಡಿಗಳವರು ಹೆದರಿ ಅಂಗಡಿಗಳನ್ನು ಮುಚ್ಚಿ ರೈತರಿಗೆ ಸಕಾಲದಲ್ಲಿ ಗೊಬ್ಬರ, ಬೀಜ ವಿತರಿಸದೆ ಬೀಗ ಹಾಕಿ ರೈತರಿಗೆ ತೊಂದರೆ ಉಂಟು ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಓ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಎಂ.ಆರ್.ಪುಟ್ಟಸ್ವಾಮಿ, ಗೌಸ್ ಪೀರ್, ಬಿ.ಡಿ.ಶ್ರೀನಿವಾಸ್, ತಾಲೂಕು ಕಾರ್ಯಾಧ್ಯಕ್ಷ ದಸ್ತಗಿರಿ ಸಾಬ್, ಮಹಿಳಾ ಘಟಕದ ಅಧ್ಯಕ್ಷೆ ವಿ.ಕಲ್ಪನಾ, ಎಚ್.ಆರ್.ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಎಚ್.ರಂಗಸ್ವಾಮಿ , ಉಮಾಪತಿ , ಶಿವರಾಜ್, ಬೋಚಾಪುರ ರಮೇಶ್ ಮುಂತಾದವರು ಉಪಸ್ಥಿತರಿದ್ದರು.