ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ ಡಿಎಲ್) ಸಿಎಸ್ಆರ್ ಉಪಕ್ರಮದ ಅಡಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಅರಣ್ಯ ವೃತ್ತಗಳ 2168 ಅರಣ್ಯ ರಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಬ್ಯಾಗ್, ಜರ್ಕೀನ್, ಶೂ ಮತ್ತು ನೀರಿನ ಬಾಟಲಿ ಇರುವ ಸುರಕ್ಷಾ ಕಿಟ್ ಗಳನ್ನು ವಿತರಿಸಲಾಯಿತು.ಕರ್ನಾಟಕ ರಾಜ್ಯ ಮುಕ್ತ ವಿವಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕೆಎಸ್ ಡಿಎಲ್ 2024-25ರಲ್ಲಿ ದಾಖಲಿಸಿದ 416 ಕೋಟಿ ರು. ಲಾಭದಲ್ಲಿ 2 ಕೋಟಿ ರು. ಸಿಎಸ್ಆರ್ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗಿದೆ. ಅರಣ್ಯ ಇಲಾಖೆಯ ಕೆಳಹಂತದಲ್ಲಿರುವ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ 10 ಸಾವಿರ ಸಿಬ್ಬಂದಿಗೆ ಕಿಟ್ ಕೊಡಲಾಗುತ್ತಿದೆ ಎಂದರು.
ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ, ಕೆಳಹಂತದ ಅರಣ್ಯ ಸಿಬ್ಬಂದಿಯ ಕಷ್ಟಗಳ ಬಗ್ಗೆ ತಮ್ಮ ಗಮನ ಸೆಳೆದಿದ್ದೇ ಈ ರಚನಾತ್ಮಕ ಉಪಕ್ರಮಕ್ಕೆ ಪ್ರೇರಣೆಯಾಗಿದೆ. ಹೀಗಾಗಿ, ಶಾಲೆಗಳ ಬಲವರ್ಧನೆಗೆ ಉಪಯೋಗಿಸಬೇಕು ಎಂದುಕೊಂಡಿದ್ದ ಹಣವನ್ನು ಇದಕ್ಕೆ ಮೀಸಲಿಟ್ಟು, ಕಿಟ್ ವಿತರಿಸಲಾಗುತ್ತಿದೆ ಎಂದರು.ಕೆಎಸ್ ಡಿಎಲ್ ಮೂಲಕ ಸದ್ಯದಲ್ಲೇ ಮಲ್ಲಿಗೆಯ ಪರಿಮಳವಿರುವ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಕಿಲೋಗೆ ಇದರ ಬೆಲೆ 2.60 ಲಕ್ಷ ರೂಪಾಯಿ ಇದೆ. ಇದರ ಜೊತೆಗೆ ಉತ್ತರ ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಕಡೆಗೆ ಗಮನ ಹರಿಸಲಾಗಿದೆ. ಇಂತಹ ಉಪಕ್ರಮಗಳ ಮೂಲಕ ಸಂಸ್ಥೆಯ ವಹಿವಾಟನ್ನು ಇನ್ನು ಮೂರು ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಇದೇ ರೀತಿಯಯ ಎಂಎಸ್ಐಎಲ್ ಮತ್ತು ಹುಬ್ಬಳ್ಳಿ ಎನ್ ಜಿಇಎಫ್ ಕಾರ್ಖಾನೆಗಳನ್ನು ಕೂಡ ಬೆಳೆಸಲಾಗುವುದು ಎಂದು ಅವರು ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ, ಕೆಎಸ್ ಡಿಎಲ್ ಅಧ್ಯಕ್ಷ ನಾಡಗೌಡ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಸುಭಾಷ್ ಮಲ್ಕೇಡ್, ಕುಮಾರ್ ಪುಷ್ಕರ್, ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಮೊದಲಾದವರು ಇದ್ದರು.ಸರ್ಕಾರಿ ಹಾಸ್ಟಲ್ ಮತ್ತು ಸರ್ಕಾರಿ ಕಚೇರಿಗಳು ಕೆಎಸ್ ಡಿಎಲ್ ಉತ್ಪನ್ನಗಳನ್ನು ಖರೀದಿಸುವಂತಾದರೆ ಸಂಸ್ಥೆಯೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ತಮ್ಮ ಸರ್ಕಾರದ ಬಂದ ಬಳಿಕ ಸಂಸ್ಥೆಯ ಅಶಿಸ್ತನ್ನು ಸರಿಪಡಿಸಿ ಲಾಭದಾಯಕ ಮಾಡಲಾಗಿದೆ. ಗುಣಮಟ್ಟದ ಹೆಚ್ಚಿಸಿದರ ಪರಿಣಾಮ 416 ಕೋಟಿ ರೂ. ಲಾಭ ಮಾಡಿದೆ. ಇ ಕಾಮರ್ಸ್, ರಫ್ತು ಪ್ರಮಾಣ ಹೆಚ್ಚಿಸಲಾಗಿದೆ. ಕೆಎಸ್ ಡಿಎಲ್ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರವಾಗುವಂತೆ ಕ್ರಮ ವಹಿಸಲಾಗುತ್ತಿದೆ.- ಎಂ.ಬಿ. ಪಾಟೀಲ್, ಬೃಹತ್ ಕೈಗಾರಿಕಾ ಸಚಿವ