ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಏಕಪಕ್ಷೀಯ ಮತ್ತು ಅನ್ಯಾಯದ ಧೋರಣೆ ಖಂಡಿಸಿ ಹಾಗೂ ಸಾರಿಗೆ ಕಾರ್ಮಿಕರ ಮತ್ತು ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ನೌಕರರ ಬೇಡಿಕೆ ಈಡೇರಿಸದ ಹೊರತು ಹೋರಾಟ ನಿಲ್ಲದು ಎಂದರು.
ಸರ್ಕಾರಿ ನೌಕರರಿಗೆ 4 ವರ್ಷ ಮೊದಲೇ 7ನೇ ವೇತನ ಆಯೋಗ ನೇಮಿಸಿ, ಶೇ.27.5ರಷ್ಟು ವೇತನ ಹೆಚ್ಚಿಸಿದ ಸರ್ಕಾರ, ಸಾರಿಗೆ ನೌಕರರ ವಿಷಯದಲ್ಲಿ ತೀವ್ರ ತಾರತಮ್ಯ ಮಾಡುತ್ತಿದೆ. ನಾಲ್ಕೈದು ದಶಕದಿಂದ ಪಾಲಿಸಿಕೊಂಡು ಬಂದಿದ್ದ ಸಂವಿಧಾನಬದ್ಧ ಕಾನೂನಾತ್ಮಕ ಹಕ್ಕುಗಳಿಗೆ ಈ ನಿರ್ಧಾರದಿಂದ ಚ್ಯುತಿ ಬಂದಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಎಸ್ಮಾ ಜಾರಿಗೊಳಿಸುವ ಬೆದರಿಕೆ ಹಾಕುವುದನ್ನು ರಾಜ್ಯ ಸರ್ಕಾರ, ಕೆಎಸ್ಸಾರ್ಟಿಸಿ ಅಧಿಕಾರಿಗಳು ಇನ್ನಾದರೂ ಬಿಡಲಿ ಎಂದರು.ರಾಜ್ಯ ಸಾರಿಗೆ ನೌಕರರ ವೇತನ ಪರಿಷ್ಕರಣೆ ತಿದ್ದುಪಡಿಯಾದ ಸರ್ಕಾರವು ಫೆ.18ರಂದು ಏಕಪಕ್ಷೀಯ ಆದೇಶ ತಿದ್ದುಪಡಿ ಮಾಡಿ, 2023ರ ಡಿ.31ರಲ್ಲಿದ್ದ ಮೂಲವೇತನವನ್ನು ಶೇ.25ರಷ್ಟು ಹೆಚ್ಚಿಸಿ, 1.1.2024ರಿಂದ 4 ವರ್ಷದ ಅವದಿಗೆ ಜಾರಿಗೊಳಿಸಬೇಕು. ಕೈಗಾರಿಕಾ ಒಪ್ಪಂದಗಳ ಪ್ರಕಾರ 2020ರ ಜು.1ರಲ್ಲಿದ್ದ ಶೇ.31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿ ರಚಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಏ.29ರ ಸಭೆಯ ತೀರ್ಮಾನದಂತೆ 38 ತಿಂಗಳ ಹಿಂಬಾಕಿ ಹಣದಲ್ಲಿ 26 ತಿಂಗಳ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಉಳಿದ 12 ತಿಂಗಳ ಬಾಕಿ ಹಣ ನೀಡಲು ಹಾಗೂ ಶೇ.25ರಷ್ಟು ವೇತನ ಹೆಚ್ಚಳಕ್ಕೆ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿತ್ತು. ಸಚಿವರು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ, ಇನ್ನೊಮ್ಮೆ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಸರ್ಕಾರ ನೀಡಿದ ಭರವಸೆಯನ್ನೇ ಮರೆತಿತು ಎಂದು ದೂರಿದರು.
ಸಂಘಟನೆಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಿರ್ಜಾ ರಹಮತ್ ಉಲ್ಲಾ, ಉಪಾಧ್ಯಕ್ಷ ಪ್ರಕಾಶ, ಸಂಘಟನಾ ಕಾರ್ಯದರ್ಶಿ ಆನಂದ ನಾಯ್ಕ, ಹರಿಹರದ ಈಶ್ವರ ಬಣವಿ, ದಿಳ್ಯಪ್ಪ ಕಾಂಬ್ಳೇರ್ ಇತರರು ಇದ್ದರು.