ಕುಮಟಾದಲ್ಲಿ ವಿಶೇಷ ಸಮಾಲೋಚನಾ ಸಭೆ, ತಜ್ಞರ ಚರ್ಚೆ
ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ಕುಮಟಾ ತೆಂಗಿನಕಾಯಿಯ ಗುಣಮಟ್ಟ ಹಾಗೂ ವಿಶೇಷತೆಯ ಕುರಿತು ವಿಶೇಷ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಕುಮಟಾದ ತೆಂಗು ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್ಗಾಗಿ ಪ್ರಯತ್ನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಎವಿಪಿ ಸಂಸ್ಥೆ ಅಧ್ಯಕ್ಷ ಗಣಪತಿ ಎಸ್. ನಾಯ್ಕ ಮಾತನಾಡಿ, ಗುಣಮಟ್ಟ ಹಾಗೂ ತನ್ನ ವಿಶಿಷ್ಟತೆಯಿಂದ ಹೆಸರಾದ ಕುಮಟಾ ತೆಂಗಿನಕಾಯಿಗೆ ರಾಷ್ಟ್ರೀಯ ಮಾನ್ಯತೆ ಪಡೆಯುವುದಕ್ಕಾಗಿ ನಮ್ಮ ಎವಿಪಿ ಸಂಸ್ಥೆಯಿಂದ ಕೈಗೊಂಡ ಕ್ರಮದ ವರದಿ ಮಂಡಿಸಿದರು. ವಿಜ್ಞಾನಿಗಳು, ತೋಟಗಾರಿಕಾ ಅಧಿಕಾರಿಗಳು, ರೈತ ಆಸಕ್ತ ಗುಂಪಿನ ಪ್ರಮುಖರು, ವಕೀಲರು ಹಾಗೂ ರೈತರಿಂದ ತೆಂಗು ಹಾಗೂ ಸಿಹಿ ಈರುಳ್ಳಿಗೆ ಜಿಐ ಟ್ಯಾಗ್ ಪಡೆಯುವತ್ತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ವಿಶೇಷ ಸಮಾಲೋಚನ ಸಭೆ ಹಮ್ಮಿಕೊಂಡಿದ್ದೇವೆ ಎಂದರು.ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್ನ ಸಂಯೋಜಕರಾದ ಸುಮಂಗಲಾ ಮುರಳಿ ಮಾಹಿತಿ ನೀಡಿ, ಕುಮಟಾ ತೆಂಗಿನ ಕಾಯಿಯು ಸ್ವಾದಿಷ್ಟಕರ ರುಚಿ, ಗಾತ್ರ, ಹೆಚ್ಚಿನ ಎಣ್ಣೆಯ ಪ್ರಮಾಣ, ದೀರ್ಘಕಾಲ ಬಾಳಿಕೆಯ ವಿಶೇಷ ಗುಣ ಧರ್ಮದೊಂದಿಗೆ ಪ್ರಾದೇಶಿಕ ಮಾರುಕಟ್ಟೆ, ಹೆಚ್ಚಿನ ಬೆಲೆ ಮತ್ತು ಬೇಡಿಕೆ ಹೊಂದಿದೆ. ಕುಮಟಾ ತೆಂಗಿನಕಾಯಿ ಮತ್ತು ಕುಮಟಾ ಸಿಹಿ ಈರುಳ್ಳಿಗೆ ಜಿ.ಐ. ಟ್ಯಾಗ್ ಮಾನ್ಯತೆ ಪಡೆಯಬಹುದಾಗಿದೆ. ಅಘನಾಶಿನಿ ನದಿ ತಟದ ಭೌಗೋಳಿಕ ಲಕ್ಷಣದ ಪ್ರಭಾವಳಿಯಿಂದ ಕೂಡಿದ ಇಲ್ಲಿನ ಹಲವಾರು ಬೆಳೆಗಳು ವಿಶೇಷ ಗುಣ ಧರ್ಮದಿಂದ ಕೂಡಿವೆ. ಜಿ.ಐ. ಟ್ಯಾಗ್ ಮಾನ್ಯತೆ ಪಡೆಯುವಲ್ಲಿ ಪೂರಕವಾದ ಗುಣ-ವಿಶೇಷಗಳ ಮಾಹಿತಿ ಬಹುತೇಕ ಲಭ್ಯವಿದ್ದು ದಾಖಲಿಸಬಹುದಾಗಿದೆ. ಪೋಷಕಾಂಶಗಳು, ಫಿಜಿಕೋ ಕೆಮಿಕಲ್ ಮತ್ತು ಆರ್ಗನೋಲಿಪ್ಟಿಕ್ ಇತರ ಗುಣ ಧರ್ಮಗಳನ್ನು ಪ್ರಮಾಣಿಕರಿಸಿ ಪೂರೈಸುವುದರ ಮೂಲಕ ಮಾನ್ಯತೆ ಪಡೆಯಬಹುದಾಗಿದೆ ಎಂದರು.
ಎವಿಪಿ ಸಂಸ್ಥೆಯ ನಿರ್ದೇಶಕ ತಿಮ್ಮಣ್ಣ ಭಟ್ ವಂದಿಸಿದರು, ಕೃಷ್ಣ ನಾಯ್ಕ, ಜಗದೀಶ್ ಪಿ., ಪ್ರಭಾಕರ ಪಟಗಾರ, ಶಂಕರ ಗೌಡ, ವೆಂಕಟೇಶ ಅಳ್ವೆಕೋಡಿ, ಕರುಣಾಕರ ಕೂಜಳ್ಳಿ, ಗಣಪತಿ ಪಟಗಾರ, ರಾಧಾಕೃಷ್ಣ ಗೌಡ, ಗೋಪಾಲಕೃಷ್ಣ ಹೆಗಡೆ, ಚಂದ್ರು ಪಟಗಾರ, ಈಶ್ವರ ಕೊಡಿಯಾ ಇತರರು ಇದ್ದರು.