ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಕಲೋತ್ಸವ-2024’ ಮತ್ತು ಕಾಲೇಜಿನ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.ವಿದ್ಯಾರ್ಥಿಗಳು 5 ತಂಡಗಳಲ್ಲಿ ತಮ್ಮ ಪ್ರತಿಭೆಗಳನ್ನು ಯಕ್ಷಗಾನ, ಭರತನಾಟ್ಯ, ಚಂಡೆವಾದನ, ವೀರಗಾಸೆ, ಕಂಗೀಲು, ರಂಗ ಕುಣಿತ, ಸೋಮನ ಕುಣಿತ, ಜನಪದ ನೃತ್ಯ, ಕಿರು ನಾಟಕ ಇತ್ಯಾದಿಗಳ ಮೂಲಕ ಪ್ರಸ್ತುತಪಡಿಸಿದರು.
ಅತ್ಯುತ್ತಮ ಪ್ರದರ್ಶನ ನೀಡಿದ ಅಗಸ್ತ್ಯ ತಂಡ ಚಾಂಪಿಯನ್, ಅದ್ವೈತ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಚಾಣಕ್ಯ ತಂಡದ ಪ್ರಥಮ ಬಿಸಿಎ ವಿದ್ಯಾರ್ಥಿನಿ ರಶೀತ ಶೆಟ್ಟಿ ಅತ್ಯುತ್ತಮ ನಿರೂಪಕಿಯಾಗಿ ಮೂಡಿಬಂದರು.ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಂಡಾರ್ಕರ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಕಾಲೇಜಿನ ಅತ್ಯುತ್ತಮ ಗುಣಮಟ್ಟದ ಮೂಲಸೌಕರ್ಯ ಮತ್ತು ಸಂಪನ್ಮೂಲದ ಬಗ್ಗೆ, ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಪ್ರಸಿದ್ಧ ಕಲಾವಿದೆ ವೃಂದ ಕೊನ್ನಾರ್, ವಿದ್ಯಾರ್ಥಿಜೀವನದ ವಿಪುಲ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಕಲಿಕೆಯ ಜೊತೆ ಕಲೆ ಹೇಗೆ ಜೀವನದಲ್ಲಿ ಉತ್ಸಾಹ ಮತ್ತು ಬದಲಾವಣೆಯನ್ನು ತರಬಲ್ಲದು ಎನ್ನುವುದನ್ನು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್, ವಾರ್ಷಿಕ ವರದಿಯನ್ನು ನೀಡಿದರು. ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿತಂದ ದ್ವಿತೀಯ ಬಿಸಿಎ ವಿದ್ಯಾರ್ಥಿ ಸನಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿ ತರಗತಿಯ ಟಾಪರ್ ಹಾಗೂ ವಿವಿಧ ಕ್ರೀಡಾ, ಸಾಂಸ್ಕೃತಿಕ ಮತ್ತು ಇತರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಉಪಾಪ್ರಾಂಶುಪಾಲ ಜಯಶೀಲ ಕುಮಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಸುಮನಾ ಅತಿಥಿಗಳನ್ನು ಪರಿಚಯಿಸಿದರು. ಬಿಸಿಎ ವಿಭಾಗದ ಮುಖ್ಯಸ್ತೆ ಸ್ವರ್ಣರಾಣಿ ಬಹುಮಾನ ವಿಜೇತರ ಪಟ್ಟಿ ಓದಿದರು. ವಾಣಿಜ್ಯ ಉಪನ್ಯಾಸಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರಶೀತ ಶೆಟ್ಟಿ ವಂದಿಸಿದರು.