ವಾರದ ಸಂತೆ ರದ್ದು, ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
ಕನ್ನಡಪ್ರಭ ವಾರ್ತೆ ಕುಂದಾಪುರಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಒಂಟಿ ಕಾಡಾನೆ ಇಲ್ಲಿನ ಸಿದ್ದಾಪುರ ಗ್ರಾಮದಲ್ಲಿ ಓಡಾಡುತಿದ್ದು, ಜನರ ಭಯಕ್ಕೆ ಕಾರಣವಾಗಿದೆ. ಮಂಗಳವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಬಾಳೆಬರೆ ಘಾಟಿಯ ರಾಜ್ಯ ಹೆದ್ದಾರಿಯಲ್ಲಿ ಓಡಾಡುತ್ತಾ ಈ ಆನೆ ಕುಂದಾಪುರದ ಹೊಸಂಗಡಿ, ಸಿದ್ದಾಪುರ ಭಾಗಕ್ಕೆ ಆಗಮಿಸಿತ್ತು.ಈ ಆನೆಗೆ ಕಾಲರ್ ಐಡಿ ಅಳವಡಿಸಲಾಗಿದ್ದು, ಇದು ಹಾಸನದ ಜಿಲ್ಲೆಯಲ್ಲಿ ಆನೆಗಳ ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ 12 ವರ್ಷ ಪ್ರಾಯದ ಆನೆ ಎಂದು ಗುರುತಿಸಲಾಗಿದೆ. ಇದು ಇಲ್ಲಿ ಮಾಸ್ತಿಕಟ್ಟೆ ಚೆಕ್ಪೋಸ್ಟ್ ಮೂಲಕ ಹಾದು ಹೋಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಅದರ ವಿಡಿಯೋ ಚಿತ್ರೀಕರಣ ಮಾಡಿದ್ದು, ಅದೀಗ ವೈರಲ್ ಆಗಿದೆ.ಅಲ್ಲಿಂದ ಸಿದ್ಧಾಪುರ ಗ್ರಾಮದೊಳಗೆ ಬಂದ ಆನೆ ಒಂದೆರಡು ಮನೆಗಳ ಪಕ್ಕದಲ್ಲಿ ಹಾದು ಹೋಗಿ ಕಾಡು ಸೇರಿದೆ. ಇದನ್ನು ಕಂಡು ಸ್ಥಳೀಯರು ಈ ಭಾಗದಲ್ಲಿ ಓಡಾಡುವುದಕ್ಕೆ ಹೆದರಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಸಿದ್ದಾಪುರ, ಹೊಸಂಗಡಿಯ ಅಂಗನವಾಡಿ ಮತ್ತು ಶಾಲೆಗೆ ರಜೆ ನೀಡಲಾಯಿತು ಮತ್ತು ಬುಧವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನೂ ಕೂಡ ರದ್ದುಪಡಿಸಲಾಗಿತ್ತು.
ಕಾಡು ಪ್ರದೇಶವಾದ ಈ ಭಾಗದಲ್ಲಿ ಈ ಒಂಟಿ ಆನೆ ಜನರ ಆಸ್ತಿ, ಪ್ರಾಣಕ್ಕೆ ಸಂಚಕಾರವಾಗುವ ಸಾಧ್ಯತೆ ಇರುವುದರಿಂದ. ಅದನ್ನು ತಕ್ಷಣ ಬಂಧಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬುಧವಾರ ಅರಣ್ಯ ಇಲಾಖೆಯ ಚಿಕ್ಕಮಗಳೂರು ವನ್ಯಜೀವಿ ವಿಭಾಗದ ಎಲಿಫೆಂಟ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನೆಗೆ ಅಳವಡಿಸಿರುವ ರೇಡಿಯೋ ಕಾಲರ್ ಮೂಲಕ ಆನೆಯನ್ನು ಟ್ರ್ಯಾಕ್ ಮಾಡಿದ್ದಾರೆ. ಆನೆ ಸಿದ್ದಾಪುರದಿಂದ ಕಾಡಿನಲ್ಲಿ ಹೆನ್ನಾಬೈಲು ಕಡೆಗೆ ಸಂಚರಿಸುತ್ತಿರುವುದು ಪತ್ತೆಯಾಗಿದೆ.............ಭದ್ರಾದಿಂದ 150 ಕಿ.ಮೀ. ಕ್ರಮಿಸಿ ಬಂದಿದೆ...ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಅವರು ಈ ಆನೆ ಭದ್ರಾ ಹುಲಿ ಸಂರಕ್ಷಣಾ ಅರಣ್ಯ ವಲಯದಲ್ಲಿರುವ ಆನೆ ಗುಂಪಿನ ಸದಸ್ಯ, ಕೆಲವು ದಿನಗಳ ಹಿಂದೆ ಲಕ್ಕವಳ್ಳಿ ರೇಂಜಿನಲ್ಲಿ ಪತ್ತೆಯಾಗಿತ್ತು, ಇದೀಗ ಸುಮಾರು 150 ಕಿ.ಮೀ. ದೂರ ಕ್ರಮಿಸಿ ಸಿದ್ಧಾಪುರ ಕಡೆಗೆ ಬಂದಿದೆ. ಅದನ್ನು ಹಿಂಬಾಲಿಸಿ ಅದು ಕಾಡಿನಲ್ಲಿಯೇ ಇರುವಂತೆ ನಿಗಾ, ಪ್ರಯತ್ನ ವಹಿಸುತಿದ್ದೇವೆ. ಅದು ಪುನಃ ಹಿಂದಕ್ಕೆ ತನ್ನ ತಂಡ ಸೇರಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.