ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರದ ಕೇರಳ ಸಮಾಜಂ ವತಿಯಿಂದ ಅ.5ರಂದು ಓಣಂ ಹಬ್ಬ ಆಚರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕೇರಳ ಸಮಾಜಂ ಅಧ್ಯಕ್ಷ ಪಿ.ರವೀಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಅ.5ರಂದು ಬೆಳಗ್ಗೆ 9 ಗಂಟೆಗೆ ಕೇರಳ ಸಮಾಜದ ಬಳಿಯಿಂದ ಮಾವೇಲಿ ವೇಷಧಾರಿಯ ಜೊತೆಗೆ ಚೆಂಡೆ ವಾದ್ಯ ಸಹಿತ ಮೆರವಣಿಗೆ ಮೂಲಕ ಕಾರ್ಯಕ್ರಮ ಸಭಾಂಗಣಕ್ಕೆ ತೆರಳಲಿದೆ. ಕಾರ್ಯಕ್ರಮದ ಅಂಗವಾಗಿ ಪೂಕಳಂ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ 5 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ 3000 ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. 5ರಿಂದ 12 ವರ್ಷ ಪ್ರಾಯದ ಮಕ್ಕಳಿಗೆ ಡ್ರಾಯಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ.
ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಅಧ್ಯಕ್ಷ ಪಿ. ರವೀಂದ್ರನ್ ವಹಿಸುವರು. ಮುಖ್ಯ ಅತಿಥಿಯಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಸೈರಸ್ ಆಸ್ಪತ್ರೆ ಗ್ರೂಪ್ ಚೇರ್ಮನ್ ಸೈನುಲ್ ಆಬಿದೀನ್, ಎಸ್ಎನ್ಡಿಪಿ ಕುಶಾಲನಗರ ಶಾಖೆ ಅಧ್ಯಕ್ಷ ಕೆ.ಟಿ. ಗಣೇಶ್, ಮಾವೇಲಿ ಸಹಕಾರ ಸಂಘ ಅಧ್ಯಕ್ಷ ಎ.ಕೆ. ವೇಣು, ನಿರ್ದೇಶಕ ಕೆ. ವರದ ಉಪಸ್ಥಿತರಿರುವರು ಎಂದು ತಿಳಿಸಿದರು.ಸನ್ಮಾನ, ಪ್ರತಿಭಾ ಪುರಸ್ಕಾರ:
ಈ ಸಂದರ್ಭ ಕೇರಳ ಸಮಾಜ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾಸಲಾಗುವುದು. ಕುಶಾಲನಗರ ಸರ್ಕಾರಿ ಎಂಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಜಾಯ್ಸ್ ಲೀನಾ ಜೋಸೆಫ್ ಅವರಿಗೆ ಸನ್ಮಾನ ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.ನಿರ್ದೇಶಕ ಕೆ.ವರದ ಮಾತನಾಡಿ, ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾವೇಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಂದ ಭರತನಾಟ್ಯ, ನಾಡೋಡಿ ನೃತ್ಯ ಓಣಂ ಪಾಟ್ ಮತ್ತು ಹಾಸ್ಯ ಭರಿತ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಕೆ.ಬಾಬು ಮೂರ್ನಾಡ್, ಕಾರ್ಯದರ್ಶಿ ಕೆ.ಜೆ. ರಾಬಿನ್, ಸಹ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ. ಆನಂದ್, ನಿರ್ದೇಶಕರಾದ ಎಂ.ಜಿ. ಪ್ರಕಾಶ್, ವಿ.ಎಸ್. ಜಿತೇಶ್, ಸುಶೀಲಾ ಮತ್ತು ನಿರ್ಮಲಾ ಶಿವದಾಸ್ ಇದ್ದರು.