ಕನ್ನಡಪ್ರಭ ವಾರ್ತೆ ಮಾಲೂರು
ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಕವನಗಳು, ನಾಟಕ, ಗದ್ಯ, ಕೃತಿಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿರುವುದರಿಂದಲೇ ಅವರು ವರ ಕವಿ, ಜಗದ ಕವಿಯಾಗಿದ್ದಾರೆ ಎಂದು ಸಾಹಿತಿ ಡಾ.ನಾ ಮುನಿರಾಜು ಹೇಳಿದರು. ಅವರು ಪಟ್ಟಣದ ಯೂನಿಕ್ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಯೂನಿಕ್ ಇಂಟರ್ನ್ಯಾಷನಲ್ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ ೧೨೦ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಯುಗದ ಕವಿ ಜಗದ ಕವಿ
ಕುವೆಂಪು ಅವರು ವರಕವಿ ಬೇಂದ್ರೆ ಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು ಎಂದರು. ಯೂನಿಕ್ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಎನ್ ಮಂಜುನಾಥ್ ಮಾತನಾಡಿ ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಅಪಾರ ಕೊಡುಗೆಯನ್ನು ನೀಡಿದ್ದು ಅವರು ೨೦ ನೇ ಶತಮಾನದ ಕನ್ನಡದ ಶ್ರೇಷ್ಠ ಕವಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಸಾಹಿತಿ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ ಹನುಮಂತಯ್ಯ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ಜೆಬಿ ವರ್ಗಿಸ್, ಮಕ್ಕಳ ಸಾಹಿತಿ ಮಾಸ್ತಿ ಕೃಷ್ಣಪ್ಪ, ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಎಸ್ ನಾರಾಯಣಸ್ವಾಮಿ, ಸಾಹಿತಿಗಳಾದ ಮಾಜಿ ನಾಗರಾಜ್, ಉಪನ್ಯಾಸಕ ಆಂಜನೇಯಲು, ಕನ್ನಡ ಶಿಕ್ಷಕಿ ಶ್ರೀವಾಣಿ, ಗಾಯಕ ನಟರಾಜ್ ಹಾಜರಿದ್ದರು.