ಕಡಲೆ ಖರೀದಿ ಕೇಂದ್ರದಲ್ಲಿ ಖಾಲಿ ಚೀಲದ ಕೊರತೆ

KannadaprabhaNewsNetwork |  
Published : Apr 05, 2026, 02:30 AM IST
ಕುಂದಗೋಳ ತಾಲೂಕಿನ ಯರಗುಪ್ಪಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಕಡಲೆ ಖರೀದಿಗಾಗಿ ರೈತರು ಕಾಯುತ್ತಾ ಕುಳಿತಿರುವುದು. | Kannada Prabha

ಸಾರಾಂಶ

ಯಲಿವಾಳ ಮತ್ತು ಸಂಶಿ ಕೇಂದ್ರಗಳಲ್ಲಿ ಖಾಲಿ ಚೀಲಗಳ ದಾಸ್ತಾನು ಶೂನ್ಯಕ್ಕೆ ತಲುಪಿದ್ದು ಅಧಿಕಾರಿಗಳು ಖರೀದಿಯನ್ನೇ ನಿಲ್ಲಿಸಿದ್ದಾರೆ. “ನಾವು ಹುಬ್ಬಳ್ಳಿಗೆ ಪತ್ರ ಬರೆದಿದ್ದೇವೆ, ಅವರು ಚೀಲ ಕಳಿಸಿಲ್ಲ” ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.

ಕುಂದಗೋಳ:

ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಲೆಂದು ಸರ್ಕಾರ ಆರಂಭಿಸಿರುವ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದು ಅಧಿಕಾರಿಗಳ ಮತ್ತು ವ್ಯವಸ್ಥೆಯ ದಾರಿದ್ರ್ಯಕ್ಕೆ ಸಾಕ್ಷಿಯಾಗಿವೆ. ತಾಲೂಕಿನಾದ್ಯಂತ ಖಾಲಿ ಚೀಲಗಳ ಕೊರತೆಯಿಂದ ಕಡಲೆ ಖರೀದಿ ಪ್ರಕ್ರಿಯೆ ಹಳ್ಳ ಹಿಡಿದಿದ್ದು, ಅನ್ನದಾತ ಬೀದಿಯಲ್ಲಿ ನಿಂತು ಕಣ್ಣೀರು ಹಾಕುವಂತಾಗಿದೆ.

ತಾಲೂಕಿನ ಕುಂದಗೋಳ, ಯಲಿವಾಳ, ಸಂಶಿ ಹಾಗೂ ಯರಗುಪ್ಪಿ ಖರೀದಿ ಕೇಂದ್ರಗಳಿಗೆ ರೈತರು ಸಾಲ-ಸೋಲ ಮಾಡಿ ಟ್ರ್ಯಾಕ್ಟರ್‌ಗಳಲ್ಲಿ ಕಡಲೆ ಹೊತ್ತು ತರುತ್ತಿದ್ದಾರೆ. ಆದರೆ, ಅಲ್ಲಿ ಚೀಲಗಳಿಲ್ಲ ಎಂಬ ಹಾರಿಕೆ ಉತ್ತರ ಕೇಳಿ ರೈತರು ಕಂಗಾಲಾಗಿದ್ದಾರೆ. ಪ್ರತಿ ದಿನದ ಟ್ರ್ಯಾಕ್ಟರ್ ಬಾಡಿಗೆ ಒಂದು ಕಡೆಯಾದರೆ, ಬಿರು ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ರೈತರ ದೇಹ ಬಳಲುತ್ತಿದೆ. ಅತ್ತ ಮಳೆಯ ಆತಂಕವೂ ಕಾಡುತ್ತಿದ್ದು, ರಾಶಿ ಮಾಡಿಟ್ಟ ಕಡಲೆ ಏನಾಗುವುದೋ ಎಂಬ ಭೀತಿ ಆವರಿಸಿದೆ.

ಕೇಂದ್ರಗಳು ಬಂದ್!:

ಯಲಿವಾಳ ಮತ್ತು ಸಂಶಿ ಕೇಂದ್ರಗಳಲ್ಲಿ ಖಾಲಿ ಚೀಲಗಳ ದಾಸ್ತಾನು ಶೂನ್ಯಕ್ಕೆ ತಲುಪಿದೆ. ಇದರಿಂದ ಬೇಸತ್ತ ಅಧಿಕಾರಿಗಳು ಖರೀದಿಯನ್ನೇ ನಿಲ್ಲಿಸಿದ್ದಾರೆ. “ನಾವು ಹುಬ್ಬಳ್ಳಿಗೆ ಪತ್ರ ಬರೆದಿದ್ದೇವೆ, ಅವರು ಚೀಲ ಕಳಿಸಿಲ್ಲ” ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ಕಡಲೆ ರಾಶಿಯನ್ನು ಖರೀದಿ ಕೇಂದ್ರದ ಮುಂದೆಯೇ ಸುರಿದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಯಲ್ಲಪ್ಪ ಬಾರಕೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಲೆ ಖರೀದಿ ಕೇಂದ್ರಗಳಲ್ಲಿ ಖಾಲಿ ಚೀಲದ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಚೀಲಗಳ ಕೊರತೆಯಾಗದಂತೆ ಕೂಡಲೇ ಪೂರೈಕೆ ಮಾಡಲು ಸೂಚಿಸಿದ್ದು, ಶೀಘ್ರವೇ ಸಮಸ್ಯೆ ಸರಿಪಡಿಸಲಾಗುವುದು.

ರಾಜು ಮಾವರಕರ, ತಹಸೀಲ್ದಾರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಸಮುದಾಯಕ್ಕೆ ಯೋಜನೆಗಳಿದ್ದರೂ ಅರ್ಜಿ ಕುಂಠಿತ: ಪಿ.ಎಂ. ಮಾಲತೇಶ
ಚಾರಣಕ್ಕೆ ತೆರಳಿದ್ದ ಯುವತಿಯ ಸುಳಿವು ಅಲಭ್ಯ