ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮತ್ತು ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಕ್ಯಾಂಪಸ್ ಟು ಕಾಪೋರೇಟ್-ಕಾರ್ಪೋರೇಟ್ ರೆಡಿನೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಂತ್ರಿಕ ಪದವಿ ಮುಗಿಸಿ ಹೊರಬಂದವರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಅವರ ಕನಸಾಗಿರುತ್ತದೆ. ಅದರ ಪೂರ್ವ ಸಿದ್ಧತೆಯ ಅರಿವಿಲ್ಲದೆ ಎಷ್ಟೋ ಮಂದಿ ಸಂದರ್ಶನದ ಹಂತದಲ್ಲೇ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಸಂವಹನಾ ಕೌಶಲ್ಯ, ಪ್ರಭಾವಶಾಲಿ ಪ್ರಸ್ತುತೀಕರಣ ಕೌಶಲ್ಯ, ವಿದ್ಯಾರ್ಹತೆಯ ವಿವರವನ್ನು ಪ್ರದರ್ಶಿಸುವ ರೀತಿಯನ್ನು ತಿಳಿದಿದ್ದರೆ ಸುಲಭವಾಗಿ ಉದ್ಯೋಗ ಪಡೆಯಬಹುದು ಎಂದರು.ಯುವ ಸಮೂಹ ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಉದ್ಯೋಗದಾತರಾಗುವುದು ಉತ್ತಮ. ಇದರಿಂದ ಉದ್ಯಮ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿ ಏಕಕಾಲಕ್ಕೆ ಆಗಲಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ. ಉದ್ಯಮಿಗಳಾಗುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡಲಾಗುವುದು ಎಂದರು.
ಗ್ರಾಮೀಣ ಭಾಗದ ಮಹಿಳಾ ಮತ್ತು ಪುರುಷ ವಿದ್ಯಾವಂತರಿಗೆ ಉದ್ಯೋಗ ಕ್ಷೇತ್ರದ ಅನುಭವವಿದೆ, ಕೌಶಲ್ಯಜ್ಞಾನವಿಲ್ಲದೆ, ಆತ್ಮವಿಶ್ವಾಸ ಕೊರತೆಯಿಂದ ದೊಡ್ಡ ದೊಡ್ಡ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ, ಉದ್ಯಮ ಸ್ಥಾಪನೆ ಮಾಡುವ ಹಂಬಲ ಇರುತ್ತದೆ, ಬಂಡವಾಳಕ್ಕೆ ಹೆದರಿ ಹಿಂಜರಿಯುತ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲಾಗುವುದು ಎಂದರು.
ನಾಲ್ಕೈದು ಕಂಪನಿಗಳ ಮೂಲಕ ಉದ್ಯೋಗ-ಉದ್ಯಮಗಳ ಸ್ಥಾಪನೆ ಬಗ್ಗೆ ಕೌಶಲ್ಯತೆ ಹೆಚ್ಚಿಸಲಾಗುತ್ತಿದೆ. ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಮತ್ತು ಯುವ ವೃತ್ತಿಪರರನ್ನು ಉದ್ಯೋಗ ಮಾರುಕಟ್ಟೆಗೆ ಸಿದ್ಧಪಡಿಸುವ ಒಂದು ಪ್ರಮುಖ ಕೌಶಲ ತರಬೇತಿ ಇದಾಗಿದ್ದು, ಇದು ಸಂವಹನ ಕೌಶಲ್ಯ, ಸಂದರ್ಶನ ತಯಾರಿ ಮತ್ತು ಕಚೇರಿಯ ಕೆಲಸದ ಸಂಸ್ಕೃತಿಯನ್ನು ಕಲಿಸುವುದಾಗಿದೆ, ಸದುಪಯೋಗ ಪಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದದಲ್ಲಿ ಕಾರ್ಯಕ್ರಮ ವಿನ್ಯಾಸಕ ಜಿ.ಸಿ.ಗೌರಿಶಂಕರ್ ಉತ್ತಮ ತರಬೇತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಿದ್ದರು. ವಿವಿಧ ಕಂಪನಿಗಳ ಸಿಬ್ಬಂದಿ ಪಾಲ್ಗೊಂಡಿದ್ದರು.