ಹಾನಗಲ್ಲ: ತಾಲೂಕಿನ ಭೂಮಾಪನ ಇಲಾಖೆಯ ೫೦ಕ್ಕೂ ಅಧಿಕ ಪರವಾನಗಿ ಸಹಿತ ಭೂಮಾಪಕರು ಒಂದು ತಿಂಗಳಿಂದ ಮುಷ್ಕರ ನಡೆಸುತ್ತಿದ್ದು, ತಾಲೂಕಿನಲ್ಲಿ ೩ ಸಾವಿರ ಭೂಮಾಪನ ಪ್ರಕರಣಗಳು ಬಾಕಿ ಉಳಿದಿದ್ದಲ್ಲದೆ, ಸೇವಾ ಭದ್ರತೆ ಸಿಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಮಹಮದ್ರಫಿಕ್ ಮಾಳಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.
ತಾಲೂಕಿನ ಭೂಮಾಪನ ಇಲಾಖೆಯಲ್ಲಿ ೭ ಜನ ಸರ್ಕಾರಿ ಭೂಮಾಪಕರಿದ್ದರೂ ಕೂಡ ಕ್ಷೇತ್ರಗಳಿಗೆ ತೆರಳಿ ಭೂಮಾನ ಮಾಡುವವರು ಕೇವಲ ಇಬ್ಬರು ಮಾತ್ರ. ಇಷ್ಟಾಗಿ ನಾವು ೫೦ ಜನ ವಿಳಂಬವಿಲ್ಲದೆ ಸೇವೆ ಸಲ್ಲಿಸಿದರೂ ಕೂಡ ನಮಗೆ ಸಿಗಬೇಕಾದ ಸೌಲಭ್ಯ, ಸೇವಾ ಭದ್ರತೆ ಇಲ್ಲ. ಕಂದಾಯ ಗ್ರಾಮ, ಪೋಡಿ ಮುಕ್ತಿ, ಕರೆ ಅಳತೆ, ಸ್ವಾಮ್ಯತ್ವ, ಬರಕಾಸ್ತ ಪೋಡಿ, ಕೋರ್ಟ್ ಪ್ರಕರಣಗಳು, ವ್ಯಾಜ್ಯ ಪ್ರಕರಣಗಳು, ಆಕಾರಂಬಂದ ಸಹಿತ ಎಲ್ಲವನ್ನೂ ನಾವೇ ಅಳತೆ ಮಾಡಿದ್ದೇವೆ. ನಿಯಮದಲ್ಲಿ ಇವೆಲ್ಲವನ್ನೂ ನಾವೇ ಮಾಡಬೇಕಾಗಿರಲಿಲ್ಲ. ಆದರೆ ನಾವು ಕರ್ತವ್ಯ ಲೋಪಕ್ಕೆ ಒಳಗಾಗಬಾರದು ಎಂದು ಈ ಎಲ್ಲ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೂ ಕೂಡ ನಮಗೆ ವೇತನವಿಲ್ಲ ಎಂದರು.
ಮನೆ ಹಕ್ಕುಪತ್ರ: ಹಾನಗಲ್ಲ ತಾಲೂಕಿನಲ್ಲಿ ಮನೆಗಳ ಹಕ್ಕು ಪತ್ರ ವಿತರಣೆಗೆ ಬೇಕಾಗುವ ಸರ್ವೇ ಕಾರ್ಯವನ್ನು ಹಗಲಿರುಳೆನ್ನದೆ ಮಾಡಿ ಮುಗಿಸಿದ್ದೇವೆ. ತಾಲೂಕು ಹಕ್ಕು ಪತ್ರ ನೀಡುವಲ್ಲಿ ಮೊದಲ ಸ್ಥಾನಕ್ಕೆ ಬರುವಲ್ಲಿ ನಮ್ಮದೂ ದೊಡ್ಡ ಪಾತ್ರವಿದೆ. ಆದರೆ ನಮ್ಮ ಸೇವೆಗೆ ಯಾವುದೇ ಮನ್ನಣೆ ಇಲ್ಲದಿರುವುದು ದುಃಖದ ಸಂಗತಿ ಎಂದರು.ರಾಜ್ಯದ ದೂರದ ಜಿಲ್ಲೆಗಳಿಂದ ಬಂದು ಇಲ್ಲಿ ಆಶಾ ಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ರೈತರ ಜಮೀನಿನಲ್ಲಿ, ಕರೆಗಳಲ್ಲಿ, ಕಾಡಿನಲ್ಲಿ ಜೀವದ ಹಂಗು ತೊರೆದು ಸರ್ವೇ ಮಾಡಬೇಕಾಗುತ್ತದೆ. ಆದರೆ ಇಲಾಖೆಯಿಂದ ಸೇವಾ ಭದ್ರತೆ ಹಾಗೂ ಜೀವ ರಕ್ಷಣೆಗೆ ಯಾವುದೇ ಕ್ರಮಗಳಿಲ್ಲ. ಜೀವ ವಿಮೆ ಕೂಡ ಇಲ್ಲ. ಸರ್ಕಾರ ದುಡಿಸಿಕೊಳ್ಳುತ್ತದೆ. ಆದರೆ ನಮ್ಮ ಸೇವೆಗೆ ಬೆಲೆ ಕಟ್ಟುತ್ತಿಲ್ಲ ಎಂದರು.
ಭೂಮಾಪಕರ ಮುಷ್ಕರದಿಂದ ರೈತರು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಇಂತಹ ಪ್ರಕರಣಗಳನ್ನು ಕೂಡಲೇ ಬಗೆಹರಿಸಬೇಕು. ಅನಿವಾರ್ಯವಾದರೆ ನಾವು ಪರವಾನಗಿ ಭೂಮಾಪಕರ ಮುಷ್ಕರ ಬೆಂಬಲಿಸಿ ಸರ್ವೇ ಇಲಾಖೆಗೆ ಬೀಗ ಹಾಕಿ ಬೆಂಬಲಿಸಲು ಯೋಚಿಸುತ್ತಿದ್ದೇವೆ ಎಂದು ಹಾನಗಲ್ಲ ತಾಲೂಕು ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.