ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆ: ಜಿ.ಆರ್. ಶೆಟ್ಟರ್

KannadaprabhaNewsNetwork | Published : Jun 2, 2025 12:41 AM
ಪ್ರಸ್ತುತ ದಿನ ಮಾನಗಳಲ್ಲಿ ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆಯಾಗುತ್ತಿದೆ. ಪ್ರತಿಯೊಂದು ಕ್ಷೇತ್ರವಾಗಲಿ, ಸಮಸ್ಯೆಯಾಗಲಿ, ಮೊದಲು ನೆನಪಿಗೆ ಬರುವುದು ವಕೀಲರು ಎಂಬ ಭಾವನೆ ಜನರಲ್ಲಿದೆ ಎಂದು ಮುಖ್ಯ ಹಿರಿಯ ದಿವಾನಿ ಜಿ.ಆರ್. ಶೆಟ್ಟರ ಹೇಳಿದರು.

ಗದಗ: ಪ್ರಸ್ತುತ ದಿನ ಮಾನಗಳಲ್ಲಿ ಕಾನೂನು ಸಮಾಜದ ಕಣ್ಣಾಗಿ ಪರಿವರ್ತನೆಯಾಗುತ್ತಿದೆ. ಪ್ರತಿಯೊಂದು ಕ್ಷೇತ್ರವಾಗಲಿ, ಸಮಸ್ಯೆಯಾಗಲಿ, ಮೊದಲು ನೆನಪಿಗೆ ಬರುವುದು ವಕೀಲರು ಎಂಬ ಭಾವನೆ ಜನರಲ್ಲಿದೆ ಎಂದು ಮುಖ್ಯ ಹಿರಿಯ ದಿವಾನಿ ಜಿ.ಆರ್. ಶೆಟ್ಟರ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಸಂಯೋಜನೆ ಘಟಕ, ಕ್ರೀಡಾ ಕೂಟ, ಎನ್.ಎಸ್.ಎಸ್ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ಜರುಗಿದ ಎಲ್.ಎಲ್.ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಮತ್ತು ವಿವಿಧ ಸ್ಪರ್ಧೆಗಳಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತಿ, ಪತ್ನಿಯ ಮುಂದೆ, ಪತ್ನಿ ಪತಿ ಮುಂದೆ ಹೇಳದ ವಿಷಯವನ್ನು ನ್ಯಾಯವಾದಿಗಳ ಮುಂದೆ ಪ್ರಸ್ತಾಪಿಸಿ ನ್ಯಾಯವನ್ನು ಪಡೆಯಲು ಮುಂದಾಗುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ವಕೀಲ ವೃತ್ತಿಗೆ ಹೆಜ್ಜೆ ಹಾಕುತ್ತಿರುವ ಯುವ ವಕೀಲರು ಸಮಾಜದ ಕಣ್ಣಾಗಿ ಕಾರ್ಯ ಮಾಡಬೇಕಿದೆ ಎಂದರು. ನ್ಯಾಯಾಲಯ ಮತ್ತು ನ್ಯಾಯವಾದಿಗಳ ಸಂಬಂಧ ಉತ್ತಮವಾಗಿ ನಡೆದುಕೊಂಡು ಹೋಗಬೇಕಾದರೆ ಯುವ ಸಮುದಾಯದ ವಕೀಲರು ಕಠಿಣ ಪರಿಶ್ರಮ ಮತ್ತು ಹೆಚ್ವು ಪುಸ್ತಕಗಳನ್ನು ಅಭ್ಯಾಸ ಮಾಡುವ ಹೊಸ ಹೊಸ ಮಹತ್ವದ ತೀರ್ಪುಗಳನ್ನು ಪುಸ್ತಕಗಳಲ್ಲಿ ಹುಡುಕುವ ಪ್ರಸಂಗ ಇತ್ತು. ಆದರೆ, ಸದ್ಯ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ತುದಿ ಬೆರಳಲ್ಲಿ ಹೊಸ ರೋಲಿಂಗ್ ದೊರೆಯುತ್ತಿವೆ. ಹೀಗಾಗಿ ಅವುಗಳ ಜ್ಞಾನದ ಜೊತೆಗೆ ಅವುಗಳಲ್ಲಿನ ತತ್ವ, ಸಿದ್ಧಾಂತಗಳು ತಮ್ಮ ಪ್ರಕರಣಗಳಿಗೆ ಅನ್ವಯವಾಗುತ್ತವೆಯೇ ಎಂಬುದರ ಬಗ್ಗೆ ಸಂಪೂರ್ಣ ಜ್ಞಾನ ಹೊಂದಬೇಕು. ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಪ್ರಕರಣ ಮತ್ತು ಜನರು ಬರುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸಿ ಅವರ ಪ್ರಕರಣಕ್ಕೆ ಯಾವ ಕಾಯ್ದೆ, ಯಾವ ರೋಲಿಂಗ್ ಅಳವಡಿಸಿಕೊಂಡು ಅವರಿಗೆ ನ್ಯಾಯ ಒದಗಿಸಲು ಶ್ರಮ ವಹಿಸಬೇಕು ಎಂದರು.

ಪ್ರಾ. ಜೈ ಹನುಮಾನ.ಎಚ್.ಕೆ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಕಾನೂನು ಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕ ತರಬೇತಿ ಕೂಡ ಬಹಳ ಅಗತ್ಯವಾಗಿದೆ. ಏಕೆಂದರೆ, ಇತ್ತೀಚಿನ ವಕೀಲರು ವಾದ ಮಂಡನೆ, ವಾದ ಸೇರಿದಂತೆ ಸಾಕ್ಷಿಗಳ ಯಾವ ರೀತಿಯಲ್ಲಿ ಸಾದರ ಪಡಿಸಬೇಕೆಂಬುದನ್ನು ಅರಿವು ಕಾರ್ಯ ಮಾಡಬೇಕಿದೆ. ಇದರಿಂದ ತಾವು ವಕೀಲರಾಗಿ ಸೇವೆ ಸಲ್ಲಿಸುವ ಸಮಯದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ ಎಂದರು.

ಆಡಳಿತ ಮಂಡಳಿ ಚೇರಮನ್ ಎಸ್.ಎ.ಮಾನ್ವಿ ಮಾತನಾಡಿ, ಕಾನೂನು ಜ್ಞಾನ ಸಂಪಾದನೆ ನಂತರ ತಮ್ಮ ಸೇವೆ ಸಮಾಜಕ್ಕೆ ಆದ್ಯತೆ ನೀಡುವುದು ಕೂಡ ಅವಶ್ಯಕವಾಗಿದೆ ಎಂದರು.

ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ, ಸ್ಥಾನಿಕ ಆಢಳಿತ ಮಂಡಳಿಯ ಸದಸ್ಯರಾದ ಎಸ್.ಎಫ್. ಹಾದಿಮನಿ, ಬಿ.ಜಿ. ಶಿಳ್ಳಿಕೇರಿ, ಹಿರಿಯ ನ್ಯಾಯವಾದಿ ಜಿ.ಸಿ.ರಶ್ಮಿ, ಬಿ.ಎ. ಹಿರೇಮಠ, ಸಿ.ಎಸ್. ರಾಚಣ್ಣವರ, ಗುರುರಾಜ ಗೌರಿ ಸೇರಿದಂತೆ ಇತರರು ಇದ್ದರು. ಉಪನ್ಯಾಸಕ ಡಾ. ವಿಜಯ ಮುರದಂಡೆ ವಾರ್ಷಿಕ ವರದಿ ವಾಚಿಸಿದರು. ಡಾ. ಶ್ರೀನಿವಾಸ ಪಾಲ್ಕೊಂಡ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚೈತ್ರ ಗೌಡ್ರ, ಶೃತಿ ಇಂಡಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭೂಮಿಕಾ ಉಪಾಧ್ಯ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಭದ್ರಾಪೂರ ವಂದಿಸಿದರು.