ಮಂಡ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಿ: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Sep 28, 2025, 02:00 AM IST
೨೭ಕೆಎಂಎನ್‌ಡಿ-೧ಮಂಡ್ಯದ ಅನ್ನಪೂರ್ಣೇಶ್ವರಿ ನಗರ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮಾಂಡವ್ಯ ನಗರ ಬಡಾವಣೆ ಉದ್ಘಾಟನೆ ಸಮಾರಂಭದಲ್ಲಿ ನಿವೇಶನ ಹಂಚಿಕೆ ಪತ್ರವನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಜನರು ಮೈಸೂರನ್ನು ಬೆಳೆಸುತ್ತಿದ್ದಾರೆ. ಸ್ಥಳೀಯ ಜನರು ತಮ್ಮ ಹುಟ್ಟೂರಿನ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಮೊದಲು ಮಂಡ್ಯವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಅಗತ್ಯವಿದೆ. ಹೊಸ ಕಾರ್ಖಾನೆಗಳು, ಕೈಗಾರಿಕೆಗಳು ಸೃಷ್ಟಿಯಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರದ ಸೌಂದರ್ಯ, ಸ್ವಚ್ಛತೆಯನ್ನು ಕಾಪಾಡಿಕೊಂಡು ಅಭಿವೃದ್ಧಿಯತ್ತ ಮುನ್ನಡೆಸುವುದು ಈ ನೆಲದ ಜನರ ಜವಾಬ್ದಾರಿಯಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಅನ್ನಪೂರ್ಣೇಶ್ವರಿ ಬಡಾವಣೆಯ ಪಕ್ಕ ನೂತನವಾಗಿ ನಿರ್ಮಿಸಿರುವ ಮಾಂಡವ್ಯ ನಗರ ಬಡಾವಣೆ ಉದ್ಘಾಟನೆ, ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪತ್ರ ವಿತರಣಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ ಸುಂದರ, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬಡಾವಣೆಗಳ ಕೊರತೆ ಕಾಡುತ್ತಿದೆ. ಆ ನಿಟ್ಟಿನಲ್ಲಿ ಮಾಂಡವ್ಯ ನಗರ ಬಡಾವಣೆ ಎಲ್ಲರಿಗೂ ಮಾದರಿಯಾಗಿದೆ. ಅತ್ಯುತ್ತಮ ರೀತಿಯಲ್ಲಿ ನಿರ್ಮಾಣಗೊಂಡು ಹೊಸದಾಗಿ ಬಡಾವಣೆ ನಿರ್ಮಿಸುವವರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಜನರು ಮೈಸೂರನ್ನು ಬೆಳೆಸುತ್ತಿದ್ದಾರೆ. ಸ್ಥಳೀಯ ಜನರು ತಮ್ಮ ಹುಟ್ಟೂರಿನ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಮೊದಲು ಮಂಡ್ಯವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಅಗತ್ಯವಿದೆ. ಹೊಸ ಕಾರ್ಖಾನೆಗಳು, ಕೈಗಾರಿಕೆಗಳು ಸೃಷ್ಟಿಯಾಗಬೇಕು. ಇಲ್ಲೇ ಉದ್ಯೋಗಗಳು ಸೃಷ್ಟಿಯಾಗಬೇಕು. ಇಲ್ಲಿನ ಜನರ ಹಣಕಾಸು ಇಲ್ಲಿನ ಜನರಿಗೇ ಸಿಗುವಂತಾಗಬೇಕು. ಮಕ್ಕಳು ಇಲ್ಲೇ ಶಿಕ್ಷಣ ಪಡೆಯುವ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳು ಉದಯಿಸಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು ಮಾತನಾಡಿ, ತಾಂತ್ರಿಕತೆ ಎಷ್ಟೇ ಬೆಳವಣಿಗೆ ಸಾಧಿಸಿದ್ದರೂ, ಮಂಡ್ಯ ನಗರ ತಾಂತ್ರಿಕವಾಗಿ ಬೆಳವಣಿಗೆಯನ್ನು ಕಂಡಿಲ್ಲ. ೫೦ ವರ್ಷದ ಹಿಂದೆ ಮಂಡ್ಯ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಬಡಾವಣೆಗಳು ಸುಂದರವಾಗಿರೂಪುಗೊಂಡಿಲ್ಲ. ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡಿಲ್ಲ. ಸ್ಥಳೀಯವಾಗಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳಿಲ್ಲ, ಒಂದು ಸ್ಫೋರ್ಟ್ಸ್ ಅಕಾಡೆಮಿ ಇಲ್ಲ. ಮಂಡ್ಯ ಮೇಲೆ ಯಾರೂ ಅವಲಂಬಿತರಾಗುವುದಕ್ಕೆ ಇಲ್ಲಿ ಏನೂ ಇಲ್ಲ ಎಂದು ವಿಷಾದಿಸಿದರು.

ಕಾವೇರಿ ಜಲವಿವಾದದ ಅಡ್ವೋಕೇಟ್ ಜನರಲ್, ಸಹಾಯಕ ಅಡ್ವೋಕೇಟ್‌ ಜನರಲ್ ಎಲ್ಲರೂ ಹೊರಗಿನವರೇ. ಇಲ್ಲಿನವರಿಗೆ ಸಮಸ್ಯೆಯ ಅರಿವಿಲ್ಲವೇ. ಇಲ್ಲಿನ ಜನರಿಗಿಂತ ಹೊರಗಿನವರು ಬಹಳ ತಜ್ಞರೇ. ನಮಗೆ ಎಲ್ಲಾ ಬುದ್ಧಿಶಕ್ತಿ, ಸಾಮರ್ಥ್ಯ, ಸಮಸ್ಯೆಯ ಆಳ-ಅಗಲ ಗೊತ್ತಿದ್ದರೂ ಇಲ್ಲಿನವರಿಗೆ ಅವಕಾಶವೇ ಸಿಗಲಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಜಿಲ್ಲೆಯ ಜನರು ಶಕ್ತಿಶಾಲಿಗಳಾಗಿದ್ದರೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ದೊರಕಿಸಲಾಗಲಿಲ್ಲ. ರಾಜಕಾರಣಿಗಳು ಎಲ್ಲರೂ ನಾವು ರೈತರ ಮಕ್ಕಳು ಅಂತಾರೆ. ಆದರೆ, ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ಸಮಾಜ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಬಡಾವಣೆಯನ್ನು ಸ್ವಚ್ಛ, ಸುಂದರವಾಗಿಟ್ಟುಕೊಳ್ಳುವುದು ನಿವಾಸಿಗಳ ಜವಾಬ್ದಾರಿ. ವೈಜ್ಞಾನಿಕ ರೀತಿಯಲ್ಲಿ ಬಡಾವಣೆಗಳು ಬೆಳವಣಿಗೆ ಕಾಣಬೇಕು. ಅದನ್ನು ಯಾರೂ ಹಾಳುಮಾಡಬಾರದು. ಮಾಂಡವ್ಯ ನಗರ ಬಡಾವಣೆ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ಬಡಾವಣೆಗಳು ನಿರ್ಮಾಣವಾಗಬೇಕು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರ ಅಭಿವೃದ್ಧಿಯತ್ತ ಸಾಗಬೇಕು. ಕಿರಿದಾದ ರಸ್ತೆಗಳಿಂದ ನಗರದ ಬಡಾವಣೆಗಳ ಸೌಂದರ್ಯ ಹಾಳಾಗಿದೆ. ನಿರ್ದಿಷ್ಟ ರೂಪು-ರೇಷೆಯಿಲ್ಲದೆ ತಲೆಎತ್ತುತ್ತಿವೆ. ಜನರು ಅಭಿವೃದ್ಧಿ ದೃಷ್ಟಿಯಿಂದ ಸಹಕರಿಸಬೇಕು. ಅವೈಜ್ಞಾನಿಕ ಬಡಾವಣೆಗಳ ರಚನೆಗೆ ಅಧಿಕಾರಿಗಳೂ ಕಾರಣರಾಗಿದ್ದಾರೆ. ಪರಿಸರವನ್ನು ಉಳಿಸುವುದರೊಂದಿಗೆ ಕೊಳಚೆ ನೀರನ್ನು ಅತ್ಯಾಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ ಜಲ ಕಲುಷಿತವಾಗದಂತೆ ತಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಮಾಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿದ್ದರಾಜು, ಅಧ್ಯಕ್ಷ ಎಂ.ಕೆ.ಜಗದೀಶ, ಉಪಾಧ್ಯಕ್ಷ ವಿ.ನಾರಾಯಣ, ನಿರ್ದೇಶಕರಾದ ಡಾ.ಎಂ.ವೈ.ಶಿವರಾಮು, ಎಸ್.ಪಿ.ತಿಮ್ಮೇಗೌಡ ಮತ್ತಿತರರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ