ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿಜಯದಶಮಿ ಮಹೋತ್ಸವದ ಕಾರ್ಯಕ್ರಮ ಸೆ.22ರಿಂದಲೇ ಆರಂಭವಾಗಿದ್ದು, ಶನಿವಾರ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಪೊಲೀಸ್ ಠಾಣೆ ಅಧಿಕಾರಿಯ ಹೆದರಿಕೆ, ಬೆದರಿಕೆ ಮಧ್ಯೆಯೂ ಆಟೋ ಚಾಲಕರು ಶಿಸ್ತಿನಿಂದ ಆಟೋ ರ್ಯಾಲಿ ನಡೆಸುವ ಮೂಲಕ ಪೊಲೀಸ್ ಅಧಿಕಾರಿಗೆ ಹಿಂದುಗಳ ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.
ಸೆ.28ರಂದು ಬೆಳಿಗ್ಗೆ 10.30ಕ್ಕೆ ಸಮಿತಿಯಿಂದ ಇಲ್ಲಿನ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಮಹಿಳಾ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಸಮಸ್ತ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಬೇಕು. ಸೆ.30ರಂದು ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಯುವಕರ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ. ಸಮಸ್ತ ವಿದ್ಯಾರ್ಥಿ, ಯುವ ಜನರು, ಹಿರಿಯರು ಭಾಗವಹಿಸಲು ಕರೆ ನೀಡಿದರು.ಅ.1ರಂದು ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಸಮಿತಿ ನೇತೃತ್ವದಲ್ಲಿ ದುರ್ಗಾ ದೌಡ್ ಕಾರ್ಯಕ್ರಮವಿದೆ. ಅ.2ರಂದು ಬೆಳಿಗ್ಗೆ 11.30ಕ್ಕೆ 44ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧೀಶರ ನೇತೃತ್ವದಲ್ಲಿ ಶೋಭಾಯಾತ್ರೆಯು ಇಲ್ಲಿನ ಶ್ರೀ ವೆಂಕಟೇಶ್ವರ ವೃತ್ತದಿಂದ ಆರಂಭವಾಗಿ ನಗರದ ವಿವಿಧ ಮಾರ್ಗದಲ್ಲಿ ಸಾಗಲಿದೆ ಎಂದು ಅವರು ತಿಳಿಸಿದರು.
ನಂತರ ಸಂಜೆ 5ಕ್ಕೆ ಶ್ರೀ ಜಡೇಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಸಮಿತಿ ಅಧ್ಯಕ್ಷ ಎಂ.ಆನಂದ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಂಬುಛೇದನ ನೆರವೇರಿಸುವರು. ಕಣ್ವಕುಪ್ಪೆ ಶ್ರೀಗಳು ಆಶೀರ್ವಚನ ನೀಡುವರು. ಕುಡುಚಿ ಶಾಸಕ ಪಿ.ರಾಜೀವ್ ಉಪನ್ಯಾಸ ನೀಡುವರು. ಸಚಿವರು, ಸಂಸದರು, ಶಾಸಕರು, ಎಸ್ಪಿ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.