ರಾಯಚೂರು: ಕೃಷಿ ವಿದ್ಯಾರ್ಥಿಗಳು ಪದವಿ ಮುಗಿದ ಬಳಿಕ ಹೊಸ ಆವಿಷ್ಕಾರ-ತಂತ್ರಜ್ಞಾನದ ನೆರವಿನಿಂದ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ ಸಲಹೆ ನೀಡಿದರು.
ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವ್ಯವಸಾಯದಲ್ಲಿ ತೊಡಗಬೇಕು ಮತ್ತು ಕೃಷಿ ಕೌಶಲ್ಯಗಳನ್ನು ಹಳ್ಳಿಗಳಲ್ಲಿ ಅಳವಡಿಸುವ ಮೂಲಕ ಕೃಷಿ ವಲಯವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದರು. ದೇಶದಲ್ಲಿರುವ 75 ಕೃಷಿ ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ನೀಡಲಾಗುವ ಗುಣಮಟ್ಟದ ಶಿಕ್ಷಣವನ್ನು ಪಡೆದು ಪ್ರತಿ ವರ್ಷವೂ 10 ಸಾವಿರ ವಿದ್ಯಾರ್ಥಿಗಳು ತೇರ್ಗಡೆ, ಎರಡು ಸಾವಿರಕ್ಕೂ ಹೆಚ್ಚಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ.
ಕೃಷಿ ಪದವಿಗಾಗಿ ಶೇ.50ರಷ್ಟು ವಿದ್ಯಾರ್ಥಿಗಳು ಕೃಷಿ ಮೀಸಲಾತಿಯಿಂದ ಪ್ರವೇಶ ಪಡೆದಿರುತ್ತಾರೆ ಆದರೆ ಪದವಿ ನಂತರ ಶೇ.5ಕ್ಕಿಂತಲೂ ಕಡಿಮೆ ಜನರು ವ್ಯವಸಾಯಕ್ಕೆ ಮರಳುತ್ತಾರೆ. ಇದರಿಂದ ಕೃಷಿ ವಲವು ಕ್ಷೀಣಿಸುತ್ತಾ ಹೋಗುತ್ತದೆ ಆದ್ದರಿಂದ ಕೃಷಿ ಮಾಡಿ ಆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪವಹಿಸಿದ್ದರು.