ಗೌರವದಿಂದ ಮಠ ಬಿಡಿ: ವಚನಾನಂದ ಶ್ರೀಗೆ ವಾರ ಗಡುವು

KannadaprabhaNewsNetwork |  
Published : Apr 17, 2026, 01:30 AM IST
16ಕೆಡಿವಿಜಿ9, 10, 11-ದಾವಣಗೆರೆಯಲ್ಲಿ ಹರಿಹರ ಪಂಚಮಸಾಲಿ ಟ್ರಸ್ಟ್‌ನ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್.ನಾಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಇನ್ನೊಂದು ವಾರದೊಳಗೆ ಪೀಠ ತೊರೆಯದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಬಂದು, ಅಲ್ಲಿಂದ ನಿಮ್ಮನ್ನು ಹೊರಹಾಕಬೇಕಾಗುತ್ತದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್. ನಾಗರಾಜ ಎಚ್ಚರಿಸಿದ್ದಾರೆ.

- ಸಾವಿರಾರು ಸಂಖ್ಯೆಯಲ್ಲಿ ನಾವೇ ಮಠಕ್ಕೆ ಬಂದು ಹೊರಹಾಕ್ತೀವಿ: ಎಚ್.ಎಸ್.ನಾಗರಾಜ ಎಚ್ಚರಿಕೆ - ಹರಿಹರ ಮಾಜಿ ಶಾಸಕರಿಗೆ ತಾಕತ್ತಿದ್ರೆ ಮಠ ಕಟ್ಟಿ, ಉಚ್ಚಾಟಿತ ಸ್ವಾಮೀಜಿಗೆ ಅಲ್ಲಿ ಸ್ವಾಮಿ ಮಾಡಲಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಇನ್ನೊಂದು ವಾರದೊಳಗೆ ಪೀಠ ತೊರೆಯದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಬಂದು, ಅಲ್ಲಿಂದ ನಿಮ್ಮನ್ನು ಹೊರಹಾಕಬೇಕಾಗುತ್ತದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್. ನಾಗರಾಜ ಎಚ್ಚರಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿ ಸಿದ್ಧವಾಗಿರಬೇಕು. ಸಾವಿರಾರು ಸಂಖ್ಯೆಯಲ್ಲಿ ನಾವು ಮಠಕ್ಕೆ ಬರುತ್ತೇವೆ. ಯಾವ ದಿನ ಪೀಠಕ್ಕೆ ಬರುತ್ತೇವೆಂದು ಸಹ ದಿನಾಂಕ ಪ್ರಕಟಿಸುತ್ತೇವೆ. ಇನ್ನೊಂದು ವಾರದಲ್ಲಿ ಮಠ ತೊರೆಯದಿದ್ದರೆ, ಹೊರಹಾಕುವ ಕೆಲಸ ನಾವು ಮಾಡುತ್ತೇವೆ ಎಂದರು.

ಪೀಠಕ್ಕೆ ವಚನಾನಂದ ಸ್ವಾಮೀಜಿಗೆ ಕೂರಿಸಿದ ಉದ್ದೇಶವೇ ಈಡೇರಲಿಲ್ಲ. ಸಮಾಜದ ಉದ್ದೇಶದಂತೆ ವಚನಾನಂದ ಸ್ವಾಮಿ ನಡೆದುಕೊಂಡಿಲ್ಲ. ಉಚ್ಚಾಟನೆಯಾದರೂ ನೈತಿಕತೆ ಬಿಟ್ಟು, ಪೀಠದಲ್ಲಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ನಾಯಕರ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಇಂತಹ ಸ್ವಾಮೀಜಿ ಮಠಕ್ಕೂ ಹಾಗೂ ಸಮಾಜಕ್ಕೂ ಅಪಾಯಕಾರಿ ಎಂದು ಹೇಳಿದರು.

ಒಂದು ವಾರದೊಳಗೆ ಮಠ ಬಿಡದಿದ್ರೆ ಸಾವಿರಾರು ಜನರನ್ನು ಕರೆ ತಂದು, ನಿಮ್ಮನ್ನು ಮಠದಿಂದಲೇ ಹೊರಹಾಕುತ್ತೇವೆ. ಕಳೆದ 8 ವರ್ಷದಲ್ಲಿ ಧಾರ್ಮಿಕ ಚಟುವಟಿಕೆ ಮಾಡದ ಸ್ವಾಮೀಜಿ ಈಗ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಪೀಠದಲ್ಲಿ ಸದ್ಯಕ್ಕೆ ಸೂಕ್ತ ವಾತಾವರಣ ಇಲ್ಲದ ಹಿನ್ನೆಲೆ ವಚನಾನಂದ ಸ್ವಾಮೀಜಿ ಪೀಠ ತ್ಯಜಿಸುವವರೆಗೂ ಪಾಲಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಪೀಠಕ್ಕೆ ಕಳಿಸಬಾರದು ಎಂದು ಮನವಿ ಮಾಡಿದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೆಸರನ್ನು ಬಳಸುವ ಯೋಗ್ಯತೆ ಉಚ್ಚಾಟಿತ ಸ್ವಾಮೀಜಿಗೆ ಇಲ್ಲ. ಶಾಮನೂರು ಶಿವಶಂಕರಪ್ಪ ಹಾಗೂ ಬಿ.ಸಿ. ಉಮಾಪತಿಯವರ ಒಡನಾಟ 65 ವರ್ಷ ಹಳೆಯದು. ಅಂತಹ ಉಮಾಪತಿಯವರನ್ನು ಟೀಕಿಸುವುದು ಸರಿಯಲ್ಲ. ತಮ್ಮ ತಂದೆ, ಮಾಜಿ ಸಚಿವ ಎಚ್.ಶಿವಪ್ಪ ಹಾಗೂ ಶಿವಪ್ಪನವರ ಸಮಾಧಿ ಈಗ ವಚನಾನಂದ ಸ್ವಾಮೀಜಿಗೆ ನೆನಪಾಗಿದೆ ಎಂದು ಅ‍ವರು ಕುಟುಕಿದರು.

ಮಾಜಿ ಸಚಿವ ಮುರುಗೇಶ ನಿರಾಣಿ 2 ವರ್ಷದ ಹಿಂದೆ ಶ್ರೀಮಠದ ಅಭಿವೃದ್ಧಿಗೆ ನೀಡಿದ್ದ ₹2 ಕೋಟಿ ಎಲ್ಲಿದೆ? ಅಷ್ಟೂ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ವಚನಾನಂದ ಸ್ವಾಮಿಗಳು ನಿರಾಣಿ ಅವರಿಂದ ಆಣೆ- ಪ್ರಮಾಣ ಮಾಡಿಸಿಕೊಂಡು, ಸುಳ್ಳು ಹೇಳಿಸುವ ಪ್ರಯತ್ನ ಮಾಡಿದರು. ಇಷ್ಟು ದಿನಗಳಲ್ಲಿ ಒಂದು ದಿನವಾದರೂ ಮಠದಲ್ಲಿ ಇದ್ದೀಯಾ? ಈಗ ಸಮಾಜದ ಭಕ್ತರು ಬೇಕಾ? ಗೌರವಯುತವಾಗಿ ಮಠದಿಂದ ಜಾಗ ಖಾಲಿ ಮಾಡಿದರೆ ಗೌರವ ಎಂದು ಅವರು ಪುನರುಚ್ಛರಿಸಿದರು.

ಸ್ವಾಮೀಜಿ ಪರ ಲೆಕ್ಕ ಕೊಡಿ ಚಳವಳಿಗೆ ಇಳಿದ ಹರಿಹರದ ಮಾಜಿ ಶಾಸಕ ಮತ್ತು ಪಟಾಲಂ ಇಷ್ಟು ದಿನ ಎಲ್ಲಿತ್ತು? ಪೀಠಕ್ಕೆ ಅಂತಹವರ ಕೊಡುಗೆ ಏನು? ಕೂಡಲ ಸಂಗಮ ಪೀಠ ಮುಗಿಸಿ, ಅಲ್ಲಿನ ಟ್ರಸ್ಟ್‌ನಿಂದ ವಜಾಗೊಂಡ ಮಾಜಿ ಶಾಸಕ ಈಗ ಹರಿಹರ ಪೀಠದ ವಿಚಾರದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಗೊಂದಲ ಮೂಡಿಸುತ್ತಿದ್ದಾರೆ. ಹಿಂದೆ ಮೀಸಲಾತಿ ಹೋರಾಟಕ್ಕೆ ಹಳ್ಳಿ ಹಳ್ಳಿಗಳಲ್ಲಿ ಜನರು, ಸಮಾಜ ಬಾಂದವರು, ಭಕ್ತರು, ಮುಖಂಡರಿಂದ ಸಂಗ್ರಹಿಸಿದ ದೇಣಿಗೆ ಮತ್ತು ಅಕ್ಕಿ ಎಷ್ಟು? ಎಷ್ಟು ಹಣ ಬಳಸಲಾಗಿದೆ? ಸಂಗ್ರಹಿಸಿದ ಅಕ್ಕಿಯನ್ನು ಎಷ್ಟು ಹಣಕ್ಕೆ ಮಾರಿಕೊಂಡಿರಿ? ಈ ಎಲ್ಲದರ ಲೆಕ್ಕ ನೀಡಲಿ ಎಂದು ಎಚ್.ಎಸ್. ನಾಗರಾಜ ತಮ್ಮ ಸಹೋದರ ಎಚ್.ಎಸ್. ಶಿವಶಂಕರ ಹೆಸರು ಹೇಳದೇ ಪ್ರಶ್ನಿಸಿದರು.

ಕೂಡಲ ಸಂಗಮ ಪೀಠದ ಅಧ್ಯಕ್ಷ ಅಶೋಕ ಗೋಪನಾಳ್ ಮಾತನಾಡಿ, ಕೂಡಲ ಸಂಗಮ ಪೀಠ ಮೀಸಲಾತಿ ಹೋರಾಟ ನಡೆಸಿದಾಗ ಅನೇಕ ಮುಖಂಡರು ಲೋಡ್‌ಗಟ್ಟಲೇ ಅಕ್ಕಿ ನೀಡಿದ್ದರು. ಆದರೆ, ಅನೇಕ ಲೋಡ್‌ ಅಕ್ಕಿಯನ್ನು ಮಾಜಿ ಶಾಸಕರು ಮಾರಿದ್ದರು. ಇದರ ಲೆಕ್ಕವನ್ನೂ ಕೇಳಿ ನಾವು ಕೂಡ ರಾಜ್ಯ ವ್ಯಾಪಿ ಹೋರಾಟ ಮಾಡುತ್ತೇವೆ. ರಂಗೀಲಾ ಸ್ವಾಮಿ, ಮೇಕಪ್ ಸ್ವಾಮಿ, ಎಸಿ ರೂಂ ಸ್ವಾಮಿ ಅಂದವರನ್ನೇ ವಚನಾನಂದ ಸ್ವಾಮಿ ಹತ್ತಿರ ಸೇರಿಸಿಕೊಂಡಿದ್ದಾರೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ಮೀಸಲಾತಿ ಹೋರಾಟ ಮಾಡಲಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದರು. ಆ ಕಾನೂನು ಹೋರಾಟದ ಕಡತ ತೋರಿಸಲಿ ಎಂದು ಸವಾಲು ಹಾಕಿದರು.

ಸಮಾಜದ ಮುಖಂಡರಾದ ಚನ್ನಬಸಪ್ಪ ಚಿಕ್ಕಮೇಗಳಗೆರೆ, ರುದ್ರಪ್ಪ ಸೋಗಿ, ಹಾಲೇಶ ಕಾಯಿಪೇಟೆ, ಜಗದೀಶ ಇತರರು ಇದ್ದರು.

- - -

(ಕೋಟ್‌)

ಹನಗವಾಡಿ ಬಳಿ ಹೆದ್ದಾರಿಯಲ್ಲಿ 5 ಎಕರೆ ಜಾಗವನ್ನು ತಮ್ಮ ತಂದೆ ಎಚ್.ಶಿವಪ್ಪ ಪಡೆದುಕೊಂಡಿದ್ದರು. ಅದರ ಸ್ವಲ್ಪ ಹಣ ನೀಡಿದ್ದೆವು. ಆದರೆ, ನೋಂದಣಿ ಆಗಿರಲಿಲ್ಲ. ಪೀಠಕ್ಕೆ ಜಾಗ ಕೇಳಿದಾಗ ನೀಡಲಾಗಿತ್ತು. ಇದು ವಿವಾದದಲ್ಲಿದೆ. ಇವತ್ತು ಲೆಕ್ಕ ಕೊಡಿ ಅಂತಾ ಕೇಳುವ ವ್ಯಕ್ತಿ ಹಿಂದೆ ಇದೇ ವಚನಾನಂದ ಸ್ವಾಮಿಗೆ ಬೈದಾಗ ನಮ್ಮನ್ನು ಬಳಸಿಕೊಂಡಿದ್ದ ಸ್ವಾಮಿ ಈಗ ಅದೇ ವ್ಯಕ್ತಿಗೆ ಕರೆಸಿ, ನಮ್ಮನ್ನು ಬೈಯ್ಯುತ್ತಿದ್ದೀರಿ? ಮಠದ ಏಳಿಗೆಗೆ ಯಾವುದೇ ಪಾತ್ರವಿಲ್ಲದ ವ್ಯಕ್ತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪರವಾಗಿ ಲೆಕ್ಕ ಕೊಡಿ ಹೋರಾಟದ ನೇತೃತ್ವ ವಹಿಸಿದ ಮಾಜಿ ಶಾಸಕನಿಗೆ ತಾಕತ್ತಿದ್ದರೆ ಮಠ ಕಟ್ಟಿ, ನಿಮ್ಮನ್ನೇ ಸ್ವಾಮೀಜಿ ಮಾಡಲಿ.

- ಎಚ್.ಎಸ್.ನಾಗರಾಜ, ಟ್ರಸ್ಟಿ, ಹರಿಹರ ಪಂಚಮಸಾಲಿ ಪೀಠ.

- - -

-16ಕೆಡಿವಿಜಿ9, 10, 11: ದಾವಣಗೆರೆಯಲ್ಲಿ ಹರಿಹರ ಪಂಚಮಸಾಲಿ ಟ್ರಸ್ಟ್‌ನ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್.ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಾವಕಾಶ ಪಡೆಯಲು ತರಬೇತಿ ಅತ್ಯವಶ್ಯಕ
ಪ್ರೈಡ್‌ ವಿದ್ಯಾರ್ಥಿನಿಯರ ಐತಿಹಾಸಿಕ ಸಾಧನೆ