ಕನ್ನಡಪ್ರಭ ವಾರ್ತೆ ಬೇಲೂರು
ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣ ಪುರಸಭೆಯ ಕಂದಾಯ ಅಧಿಕಾರಿಗಳು ಕಟ್ಟುನಿಟ್ಟಿನಿಂದ ಕಂದಾಯ ವಸೂಲಾತಿ ಮಾಡಲು ಮುಂದಾಗಿದ್ದಾರೆ.ಪಟ್ಟಣದ ಪುರಸಭೆ ವತಿಯಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದೇವಸ್ಥಾನ ಮುಖ್ಯರಸ್ತೆಯ ಅಂಗಡಿ, ಮನೆಗಳು ಸೇರಿದಂತೆ ವಿವಿಧ ಕಟ್ಟಡಗಳಿಂದ ಕಟ್ಟುನಿಟ್ಟಾಗಿ ಕಂದಾಯ ವಸೂಲಾತಿಯನ್ನು ಅಧಿಕಾರಿಗಳು ಮಾಡಿದರು.ಈ ವೇಳೆ ಪುರಸಭೆ ಕಂದಾಯ ಇಲಾಖೆ ಅಧಿಕಾರಿ ಗೋಪಿ ಮಾತನಾಡಿ, ಪುರಸಭೆ ವತಿಯಿಂದ ಪಟ್ಟಣದಲ್ಲಿ ಕಂದಾಯ ವಸೂಲಾತಿ ಮಾಡುತ್ತಿದ್ದು, ಪಟ್ಟಣದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ವಿವಿಧ ಮೂಲಗಳಿಂದ ಆದಾಯವನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಕಂದಾಯ ವಸೂಲಾತಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದಿನಿಂದ ವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಪಟ್ಟಣದ ನಾಗರಿಕರಿಂದ ಕಾನೂನುಬದ್ಧವಾಗಿ ಕಂದಾಯ ಸಂಗ್ರಹಿಸುವ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಿದ್ದೇವೆ. ಇದರ ಜೊತೆಯಲ್ಲಿ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಕಂದಾಯ ಪಾವತಿಸುವವರು ಸೌಜನ್ಯದಿಂದ ವ್ಯವಹರಿಸುವಂತೆ ಮತ್ತು ಕಂದಾಯ ನಿಯಮಗಳು ಅದರ ಕಾರ್ಯ ವಿಧಾನಗಳ ಬಗ್ಗೆ ನಾವು ಅವರಿಗೆ ತಿಳಿ ಹೇಳಿ ಜಾಗೃತಿ ಮುಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ನಂತರ ಬಿಲ್ ಕಲೆಕ್ಟರ್ ಜಯರಾಂ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆ ಇಂದು ಎಲ್ಲೆಲ್ಲಿ ಬಾಕಿ ಇರುವ ಕಂದಾಯ ಕಟ್ಟುವುದು ಅಲ್ಲಿ ತೆರಳಿ ಆದಷ್ಟು ಬೇಗ ಎರಡು ದಿನಗಳಲ್ಲಿ ಕಂದಾಯ ಕಟ್ಟುವಂತೆ ಎಚ್ಚರಿಕೆ ನೀಡಿದ್ದೇವೆ. ಸಂಗ್ರಹಿಸಿದ ಸಮಗ್ರ ದಾಖಲೆಗಳನ್ನು ನಿಖರವಾಗಿ ನಿರ್ವಹಿಸಲಾಗುತ್ತದೆ. ಬಾಕಿ ಇರುವ ಕಂದಾಯ ವಸೂಲಿ ಮಾಡಲು ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಂದಂತ ಕಂದಾಯ ವಸೂಲಿ ಪುರಸಭೆಯ ಸುಗಮ ಕಾರ್ಯನಿರ್ವಾಹಣೆ ರಸ್ತೆ ನಿರ್ಮಾಣ ಸ್ವಚ್ಛತೆ ನೀರು ಸರಬರಾಜು ಒಳಚರಂಡಿ ಸೇರಿದಂತೆ ಮುಂತಾದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಬಿಲ್ ಕಲೆಕ್ಟರ್ ಗಣೇಶ್ ಆನಂದ್, ಸಲೀಂ, ಮೋಹನೇಶ್, ಜಯರಾಂ, ಸಲ್ಮಾನ್, ಸಿಬ್ಬಂದಿ ಹಾಜರಿದ್ದರು.