ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಪಟ್ಟಣ ಪೊಲೀಸ್ ಠಾಣೆ ಸಹಯೋಗದೊಂದಿಗೆ ಕಾಲೇಜಿನಲ್ಲಿ ನಡೆದ ಆರಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೇಲು ಕೀಳು ಎಂಬ ಬೇಧವಿಲ್ಲದೆ ಸಮಾಜದಲ್ಲಿನ ಪ್ರತಿಯೊಬ್ಬರ ನೆಮ್ಮದಿಗಾಗಿ ಕಾನೂನು ರೂಪಿಸಲಾಗಿದ್ದು, ಕಾನೂನಿನ ಮೂಲಕ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗಿದೆ ಎಂದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು ಇದರಿಂದ ಭವಿಷ್ಯದಲ್ಲಿ ಸಮಾಜಘಾತುಕ ಕೃತ್ಯಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.ದೇಶದ ಸಂಪೂರ್ಣ ವ್ಯವಸ್ಥೆ ಸಂವಿಧಾನದಡಿಯಲ್ಲಿ ರೂಪಿಸಲಾದ ಕಾನೂನಿನ ಮೂಲಕ ನಿಯಂತ್ರಿಸಲಾಗುತ್ತದೆ. ಸಂವಿಧಾನದಡಿಯಲ್ಲಿ 40 ಸಾವಿರ ಕಾನೂನುಗಳಿದ್ದು,ಪ್ರತಿ ಕಾನೂನಿನಲ್ಲಿ 500 ಸೆಕ್ಷನ್ಗಳಿವೆ. ನೆಮ್ಮದಿಯ ಬದುಕಿಗಾಗಿ ವಿದ್ಯಾರ್ಥಿಗಳು ಕಾನೂನಿನ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಜನತೆಯ ನೆಮ್ಮದಿ ಕೇಂದ್ರಿಕರಿಸಿಕೊಂಡು ರೂಪಿಸಲಾದ ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ಹಕ್ಕು ಹಾಗೂ ಜವಾಬ್ದಾರಿಯನ್ನು ನೀಡಲಾಗಿದೆ. ಯಾವುದೇ ಸಂದರ್ಬದಲ್ಲಿ ತಪ್ಪು ಮಾಡಬಾರದು ಎಂದು ತಿಳಿಸಿದರು.
ಪೋಕ್ಸೋದಂತಹ ಕಾಯ್ದೆಯಡಿ ಅಪರಾಧಿಯಾಗಬಾರದು. ಪೋಕ್ಸೋ ಕಾಯ್ದೆ 2012ರಲ್ಲಿ ಜಾರಿಯಾಗಿದ್ದು ಶಿಕ್ಷೆಗೆ ಒಳಪಟ್ಟ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದ ಅವರು, ಮೊಬೈಲ್ ಫೋನ್ಗಳಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಣೆಗೆ ದೂರು ದಾಖಲಿಸಲಾಗುವುದು. ಈ ದಿಸೆಯಲ್ಲಿ ಮಿತವಾಗಿ ಹಾಗೂ ಶೈಕ್ಷಣಿಕ ಪ್ರಗತಿಗೆ ಮಾತ್ರ ಬಳಸುವಂತೆ ತಿಳಿಸಿದರು.18 ವರ್ಷ ಮೀರಿದಲ್ಲಿ ಮಾತ್ರ ಮೋಟಾರ್ ವಾಹನಗಳನ್ನು ಪರವಾನಿಗೆ ಪಡೆದು ಚಲಾಯಿಸಬಹುದಾಗಿದ್ದು,ಪೋಲಿಸ್ ಸಿಬ್ಬಂದಿ ಬಗ್ಗೆ ಗೌರವವಿರಲಿ,ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಉಪನ್ಯಾಸಕ, ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಬಂಗಾರಪ್ಪ ಮಾತನಾಡಿ, ಎಲ್ಲ ಪೋಷಕರು ಮಕ್ಕಳ ಬಗ್ಗೆ ಉನ್ನತ ಕನಸು ಹೊಂದಿ ಕಾಲೇಜಿಗೆ ದಾಖಲಿಸುವುದು ಸಾಮಾನ್ಯ.ಮಕ್ಕಳು ಕೆಟ್ಟ ಚಟಗಳಿಗೆ ಬಲಿಯಾಗದೆ ಪೋಷಕರ ಕನಸು ನನಸಾಗಿಸುವ ಒಳ್ಳೆಯ ವಿದ್ಯಾರ್ಥಿಗಳಾಗಿ ಎಂದು ತಿಳಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್ ಲಮಾಣಿ, ಕಾನೂನುಗಳನ್ನು ನೀವು ಗೌರವಿಸಿದರೆ ಕಾನೂನು ನಿಮ್ಮನ್ನು ಕಾಪಾಡುತ್ತವೆ ಎಂದು ತಿಳಿಸಿದರು .ಕಾಲೇಜು ಪ್ರಾಂಶುಪಾಲ ರಮೇಶ್ ಡಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಮೃತ ಪ್ರಾರ್ಥಿಸಿ, ಉಪನ್ಯಾಸಕ ಮಂಜುನಾಥ್ ನಾಯಕ್ ಸ್ವಾಗತಿಸಿ, ಸಂತೋಷ ಅಗಡಿ ನಿರೂಪಿಸಿ, ಸಿದ್ದನಗೌಡ ವಂದಿಸಿದರು.