ವಿಧಾನ ಪರಿಷತ್‌ ಚುನಾವಣೆ; ಜಿಲ್ಲಾ ಕಾಂಗ್ರೆಸ್ ಪೂರ್ವಭಾವಿ ಸಭೆ

KannadaprabhaNewsNetwork | Published : May 21, 2024 12:35 AM

ಸಾರಾಂಶ

6ನೇ ವೇತನ ಆಯೋಗದ ಎಲ್ಲಾ ಶಿಫಾರಸ್ಸುಗಳ ಯಥಾವತ್ತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದರಿಂದ ಕನಿಷ್ಟ 10 ಸಾವಿರದಿಂದ 20 ಸಾವಿರ ರು.ವರೆಗೆ ಲಾಭವಾಗಿದೆ. ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಹುದ್ದೆಗಳ ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ.

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆಯುವ ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಈ ವೇಳೆ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್, ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ್ ಕುಮಾರ್, ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ್ರು, ಸೂಡಾ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಭೋವಿ ನಿಗಮದ ಅಧ್ಯಕ್ಷ ಎನ್.ರವಿ ಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಲ್ಲವಿ, ಮರಿಯಪ್ಪ, ಶ್ರೀನಿವಾಸ್ ಕರಿಯಣ್ಣ, ಎಚ್. ಸಿ ಯೋಗೇಶ್, ಬಲ್ಕಿಷ್ ಬಾನು ಸೇರಿ ಹಲವರಿದ್ದರು.---

ಕಾಂಗ್ರೆಸ್‌ ಸರ್ಕಾರದಿಂದ ಶಿಕ್ಷಕರು, ಪದವೀಧರರಿಗೆ ಹಲವು ಸೌಲಭ್ಯ: ಕುಬೇರಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ನೇತೃತ್ವದ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಸೌಲಭ್ಯ ನೀಡಿದ್ದು, ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಸಲು ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ.ಕುಬೇರಪ್ಪ ಮನವಿ ಮಾಡಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 6ನೇ ವೇತನ ಆಯೋಗದ ಎಲ್ಲಾ ಶಿಫಾರಸ್ಸುಗಳ ಯಥಾವತ್ತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದರಿಂದ ಕನಿಷ್ಟ 10 ಸಾವಿರದಿಂದ 20 ಸಾವಿರ ರು.ವರೆಗೆ ಲಾಭವಾಗಿದೆ. ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಹುದ್ದೆಗಳ ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ ಎಂದು ತಿಳಿಸಿದರು. 25 ವರ್ಷಗಳಿಂದ ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳ ತುಂಬಲು ಅನುಮತಿ ನೀಡಿದ್ದರಿಂದ ಪಿ.ಎಚ್.ಡಿ. ಪಡೆದ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಿರುದ್ಯೋಗ ಪದವೀಧರ ಯುವಕರು ಮತ್ತು ಯುವತಿಯರಿಗೆ ತಿಂಗಳಿಗೆ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1500 ರು. ನೀಡಲಾಗುತ್ತಿದೆ ಎಂದರು.ಇತ್ತೀಚೆಗೆ ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಮಾಸಿಕ ವೇತನ ಕನಿಷ್ಠ 38ರಿಂದ 48 ಸಾವಿರ ರು.ವರೆಗೆ ಹೆಚ್ಚಿಸಿದ್ದು, ಅವರಿಗೆ ಆರೋಗ್ಯ ವಿಮೆ, ನಿವೃತ್ತಿ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ರು. ಇಡುಗಂಟು ನೀಡುವ ಆದೇಶ ಮಾಡಲಾಗಿದೆ ಎಂದರು.ಈಗಾಗಲೇ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಮಧ್ಯಂತರ ಪರಿಹಾರ ಘೋಷಿಸಿದ್ದು, ಅತಿ ಶೀಘ್ರದಲ್ಲೇ ಈ 7ನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ. ರಾಜ್ಯದ ಎಲ್ಲಾ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ ಅಥವಾ ನಿಧನದಿಂದ ಖಾಲಿಯಾದ ಶಿಕ್ಷಕರ ಹುದ್ದೆಗಳನ್ನು 2015ರವರೆಗೆ ತುಂಬಲಾಗಿದೆ ಎಂದರು. 2023ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಅನುದಾನರಹಿತ ಶಾಲಾ ಕಾಲೇಜುಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಅನುದಾನಕ್ಕೊಳಪಡಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೆ. ದೇವೇಂದ್ರಪ್ಪ, ಎಚ್.ಎಸ್. ಬಾಲಾಜಿ, ನವೀನ್, ವಿನಯ್ ತಾಂಡ್ಲೆ, ಮೋಹನ್, ಶಂಕರ್, ಗಿರೀಶ್, ಲಕ್ಷ್ಮಣ್, ಭರತ್ ಉಪಸ್ಥಿತರಿದ್ದರು.

Share this article