ಹುಬ್ಬಳ್ಳಿ:
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆಯನ್ನು ಸೆರೆಹಿಡಿಯಲು ಈಗಾಗಲೇ ಬೋನ್ ಇಡಲಾಗಿದೆ. ಚಿರತೆಯ ಚಲನವಲನ ಗುರುತಿಸಿ ಸೆರೆಹಿಡಿಯಲು ಕ್ಯಾಮೆರಾ ಟ್ರಾಪ್ ಸಹ ಅಳವಡಿಸಲಾಗಿದೆ. ಅರಣ್ಯ ಮುಂಚೂಣಿ ಸಿಬ್ಬಂದಿ ಹಗಲು ಮತ್ತು ರಾತ್ರಿಗಸ್ತು ತಿರುಗುತ್ತಿದ್ದಾರೆ.
ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್, ವಲಯ ಅರಣ್ಯ ಅಧಿಕಾರಿ, ಆರ್.ಎಸ್. ಉಪ್ಪಾರ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳು ಹುಬ್ಬಳ್ಳಿಯ ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ಸ್ಥಳ ಪರಿಶೀಲನೆ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ಚಿರತೆ ಸಿಗುವವರೆಗೂ ಸ್ಥಳದ ಸುತ್ತಮುತ್ತ ಸಾರ್ವಜನಿಕರು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಒಬ್ಬರೇ ಸಂಚರಿಸಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಗುಂಪಾಗಿ ಓಡಾಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ತಿಳಿಸಿದ್ದಾರೆ.
ಗಾಮನಗಟ್ಟಿ ಪ್ರದೇಶದ ವ್ಯಾಪ್ತಿಯಲ್ಲಿ ತ್ಯಾಜ್ಯ ಪದಾರ್ಥ ಎಸೆಯುತ್ತಿರುವುದರಿಂದ ಅದನ್ನು ತಿನ್ನಲು ಬೀದಿ ನಾಯಿಗಳು ಬರುತ್ತವೆ. ಅವುಗಳನ್ನು ಹಿಡಿಯಲು ಚಿರತೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಮುನ್ನೆಚ್ಚರಿಕೆ ವಹಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗೆ ತಿಳಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪತ್ರ ಬರೆಯುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಕವರಿ ತಿಳಿಸಿದ್ದಾರೆ.