ಸೂಳೆಕೆರೆ ಕೋಡಿ ಬೀಳುವ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಶುರುವಾಯ್ತು ಆತಂಕ

KannadaprabhaNewsNetwork |  
Published : Mar 28, 2025, 12:36 AM IST
ಸೂಳೆಕೆರೆಯ ಕೋಡಿ ಬೀಳುವ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಚಿರತೆ | Kannada Prabha

ಸಾರಾಂಶ

ತಾಲೂಕಿನ ಸೂಳೆಕೆರೆ ಪ್ರದೇಶದಲ್ಲಿ ಬುಧುವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಸೂಳೆಕೆರೆಯ ಸುತ್ತಮುತ್ತಲ ಗ್ರಾಮಗಳಾದ ಕೆರೆಬಿಳಚಿ, ಹೊಸೂರು, ರುದ್ರಾಪುರ, ಬಸವರಾಜಪುರ ಗ್ರಾಮಗಳ ಜನರು ಭಯಗೊಂಡಿದ್ದಾರೆ.

- ಬುಧವಾರ ಬೆಳಗ್ಗೆ ಚಿರತೆ ಚಿತ್ರ ಸೆರೆಹಿಡಿದ ರೈತ ಮುಜಾಹಿದ್ ಬೇಗ್ । ಅರಣ್ಯ ಇಲಾಖೆ ಚುರುಕು, ಬೋನು ಅಳವಡಿಕೆ

- - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸೂಳೆಕೆರೆ ಪ್ರದೇಶದಲ್ಲಿ ಬುಧುವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಸೂಳೆಕೆರೆಯ ಸುತ್ತಮುತ್ತಲ ಗ್ರಾಮಗಳಾದ ಕೆರೆಬಿಳಚಿ, ಹೊಸೂರು, ರುದ್ರಾಪುರ, ಬಸವರಾಜಪುರ ಗ್ರಾಮಗಳ ಜನರು ಭಯಗೊಂಡಿದ್ದಾರೆ. ಈ ಚಿರತೆಯು ಬುಧವಾರ ಬೆಳಗ್ಗೆ 6.30ರಲ್ಲಿ ಸೂಳೆಕೆರೆ ಕೋಡಿ ಬೀಳುವ ಪ್ರದೇಶದ ತಗ್ಗು ದಿಬ್ಬ ಮತ್ತು ಪೊದೆಗಳಿಂದ ಕೂಡಿರುವ ಪ್ರದೇಶದಲ್ಲಿ ರೈತ ಮುಜಾಹಿದ್ ಬೇಗ್ ಅವರ ಕಣ್ಣಿಗೆ ಬಿದ್ದಿದೆ. ಮುಜಾಹಿದ್‌ ಚಿರತೆ ಫೋಟೋ ತೆಗೆದಿದ್ದಾರೆ. ಈ ಪೋಟೋವನ್ನು ಸ್ನೇಹಿತರಿಗೆ ತೋರಿಸಿ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

ಎ.ಸಿ.ಎಫ್. ರತ್ನಪ್ರಭ ಮಾರ್ಗದರ್ಶನದಲ್ಲಿ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಉಷಾ ಅವರು ಇಲಾಖೆ ಅಗತ್ಯ ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿ, ಸೂಳೆಕೆರೆಯ ಕೋಡಿ ಬೀಳುವ ಪ್ರದೇಶದಲ್ಲಿ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿದರು.

ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಅಧ್ಯಕ್ಷ ಅಸ್ಲಾಂ ಶೇಖ್‌ ಮಾತನಾಡಿ, ಸೂಳೆಕೆರೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಬೀದಿನಾಯಿಗಳು ಅಧಿಕವಾಗಿದ್ದು, ಚಿರತೆಗಳಿಗೆ ಪ್ರಿಯವಾದ ಆಹಾರವೂ ಆಗಿದೆ. ಗುರುವಾರ ಬೆಳಗ್ಗೆಯೂ ಕೆರೆಬಿಳಚಿ ಗ್ರಾಮದ ಎರಡು ನಾಯಿಗಳನ್ನು ಚಿರತೆ ಹಿಡಿದು ತಿಂದುಹಾಕಿದೆ. ಸೂಳೆಕೆರೆ ಪ್ರದೇಶದಲ್ಲಿ ಕಾಡುಪ್ರಾಣಿಗಳಿಗೆ ಆಹಾರ, ಕುಡಿಯುವ ನೀರು ಸಿಗುವುದರಿಂದ ಚಿರತೆ, ಆನೆ, ಕರಡಿಯಂತಹ ಪ್ರಾಣಿಗಳು ಆಗಾಗ ಸಂಚರಿಸುತ್ತ ಜನರಲ್ಲಿ ಆತಂಕ ಮೂಡಿಸುತ್ತಿವೆ ಎಂದಿದ್ದಾರೆ.

ಬುಧವಾರ ಸಂಜೆ ಡ್ರೋನ್‌ ಕ್ಯಾಮರಾ ಮೂಲಕ ಚಿರತೆ ಇದ್ದ ಸ್ಥಳ ಮತ್ತು ಅದರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯಲು ಪಂಜರ ಅಳವಡಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಉಷಾ ತಿಳಿಸಿದ್ದಾರೆ.

3 ವರ್ಷಗಳ ಹಿಂದೆ ಸೂಳೆಕೆರೆಯ ಬಸ್ ನಿಲ್ದಾಣದ ಬಳಿಯ ಪಾಳುಬಿದ್ದ ಪ್ರವಾಸಿ ಮಂದಿರದ ಒಳಗೆ ಚಿರತೆ ಸೇರಿಕೊಂಡು ಜನರ ಆತಂಕಕ್ಕೆ ಕಾರಣವಾಗಿತ್ತು. ಆಗ ಚಿರತೆ ಹಿಡಿದು ದಟ್ಟಅರಣ್ಯ ಪ್ರದೇಶಕ್ಕೆ ಕಳಿಸದೇ, ಅದನ್ನು ಅಲ್ಲಿಂದ ಓಡಿಸಿದ್ದರು. ಆ ದಿನಗಳಿಂದ ಇಲ್ಲಿಯವರೆಗೆ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಜನರು ಭಯಬೀತರಾಗುತ್ತಿದ್ದಾರೆ. ಸೂಳೆಕೆರೆಯಿಂದ ಕೆರೆ ಕೋಡಿ ಬೀಳುವ ಪ್ರದೇಶದಲ್ಲಿ ಜನರು ತಿರುಗಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಸ್ಥಳಕ್ಕೆ ಭದ್ರಾವತಿ ವಿಭಾಗದ ಡಿ.ಸಿ.ಎಫ್. ಆಶಿಶ್ ರೆಡ್ಡಿ, ಅಧಿಕಾರಿಗಳಾದ ಹನುಮಂತರಾಯ, ಮನೋಹರ್ ಭೇಟಿ ನೀಡಿದ್ದರು. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ಬೀಟ್ ಫಾರೆಸ್ಟರ್ ತಿಪ್ಪೇಸ್ವಾಮಿ, ಸಿಬ್ಬಂದಿ ನಿಯೋಜಿಸಲಾಗಿದೆ.

- - - -27ಕೆಸಿಎನ್‌ಜಿ2.ಜೆಪಿಜಿ: ಸೂಳೆಕೆರೆಯ ಕೋಡಿ ಬೀಳುವ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಚಿರತೆ.

-27ಕೆಸಿಎನ್‌ಜಿ3.ಜೆಪಿಜಿ: ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ