ಕನ್ನಡಪ್ರಭ ವಾರ್ತೆ ಗುರುಮಠಕಲ್
ಸಮೀಪದ ಸೈದಾಪುರ ಪಟ್ಟಣದಲ್ಲಿ ವನ ಮಿತ್ರರ ತಂಡದಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ತಂಡದ ಸಂಯೋಜಕ ಮಹೇಶ ವಿ. ಪಾಟೀಲ್ ಮಾತನಾಡಿ, ಸಸಿಗಳನ್ನು ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಇದರಿಂದ ಆಮ್ಲಜನಕ ಉತ್ಪತ್ತಿಯಾಗಿ ಬಿಸಿಲಿನ ತಾಪ ಕಡಿಮೆಯಾಗಲು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ಇಡಬಹುದು. ಪ್ರತಿ ವರ್ಷ ಮಳೆಗಾಲದಲ್ಲಿ ಅರಣ್ಯ ಇಲಾಖೆಯಿಂದ ಲಕ್ಷಾಂತರ ಸಸಿ ಹಾಕಲಾಗುತ್ತದೆ. ಅವುಗಳಲ್ಲಿ ಅರ್ಧ ಸಸಿ ಪೋಷಣೆ ಮಾಡಿ ಬೆಳಿಸಿದರೆ ಪರಿಸರ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ ಪೋಷಣೆ ಇಲ್ಲದೆ ಅನೇಕ ಸಸಿಗಳು ಹಾಕಿದ ಒಂದೆರಡು ತಿಂಗಳಲ್ಲಿ ಒಣಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಾತಾವರಣದಲ್ಲಿ ಮಲಿನತೆ ತಡೆಯಲು ಪರಿಸರ ಸಮತೋಲನ ಅತ್ಯಗತ್ಯ. ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸುವ ಕಾರ್ಯಕ್ಕೆ ಕೈಜೋಡಿಸುವಂತೆ ತಿಳಿಸಿದರು.ವಿದ್ಯಾ ವರ್ಧಕ ಸಂಘದ ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ ಮಾತನಾಡಿ, ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡಿದ ಯುವಕರು ಸೇರಿಕೊಂಡು ಸಾಧ್ಯವಾದಷ್ಟು ತಾವು ಹುಟ್ಟಿ ಬೆಳದಿರುವ ಸ್ಥಳಗಳಲ್ಲಿ ತಮ್ಮ ಸ್ವಂತ ಹಣ ಮತ್ತು ಶ್ರಮದಾನದ ಮೂಲಕ ಸಸಿಗಳನು ನೆಡುತ್ತಿರುವುದು ಇತರರ ಯುವಕರಿಗೆ ಮಾದರಿ. ಈ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ಸಹಕಾರ ನೀಡಬೇಕೆಂದು ತಿಳಿಸಿದರು.