ಪರೀಕ್ಷೆ-ಭಯ ಬಿಟ್ಟು ಸಿದ್ಧತೆ ಕೈಗೊಳ್ಳಿ: ರಾಘವೇಂದ್ರಗೌಡ ಪಾಟೀಲ

KannadaprabhaNewsNetwork | Published : Feb 21, 2025 11:46 PM

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸುವ ನಿಟ್ಟಿನಲ್ಲಿ ಪ್ರೇರಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ.

ಸವಣೂರು: ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯ ಪಡುವ ಬದಲಾಗಿ ಸಿದ್ಧತೆ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಕಾರಡಗಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ರಾಘವೇಂದ್ರಗೌಡ ಪಾಟೀಲ ಹೇಳಿದರು.

ಜೆಸಿಐ ಸವಣೂರು ನಮ್ಮ ಸವಣೂರು ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ತಾಲೂಕಿನ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಾಗೂ ಒಂದು ದಿನದ ಪ್ರೇರಣಾ ಶಿಬಿರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆಯನ್ನು ಉತ್ಸಾಹದಿಂದ ಎದುರಿಸುವ ನಿಟ್ಟಿನಲ್ಲಿ ಪ್ರೇರಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಮಂತ್ರೋಡಿ ಗ್ರಾಪಂ ಅಧ್ಯಕ್ಷ ಬಾಪುಗೌಡ ಕೊಪ್ಪದ ಶಿಬಿರ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಉನ್ನತ ಸಾಧನೆಗೆ ಛಲ ಇರಬೇಕು. ವಿದ್ಯಾರ್ಥಿಗಳ ಮನೋಭಾವನೆಗೆ ತಕ್ಕಂತೆ ಪ್ರೇರಣೆ ಅವಶ್ಯವಾಗಿದೆ ಎಂದರು.

ಬಿಇಒ ಎಂ.ಎಫ್. ಬಾರ್ಕಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ ಮಾತನಾಡಿ, ಜೆಸಿಐ ಸಂಸ್ಥೆ ತಾಲೂಕಿನ 10 ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ 49 ಪ್ರೌಢಶಾಲೆಗಳಲ್ಲಿ ಓದುವ 2110 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಶೇ. 40ಕ್ಕಿಂತ ಕಡಿಮೆ ಅಂಕ ಪಡೆಯಬಹುದಾದ ಸುಮಾರು 425 ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಾಗೂ ಪ್ರೇರಣಾ ಶಿಬಿರ ಆಯೋಜಿಸಿರುವುದು ಉತ್ತಮ ಸಾಮಾಜಿಕ ಕಾರ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಎಲ್.ಕೆ. ಮುರಳೀಧರ, ಹರೀಶ ಕುಲಕರ್ಣಿ, ಕೃಷ್ಣ ಮಾಸಣಗಿ ಹಾಗೂ ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಬಳಿಕ ತರಬೇತುದಾರರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಇಲಾಖೆ ಬಿಆರ್‌ಪಿ ಡಿ.ಆರ್. ತೋಟಗೇರ, ಪತ್ರಕರ್ತ ಆನಂದ ಮತ್ತಿಗಟ್ಟಿ ಕಾರ್ಯಕ್ರಮದ ಕುರಿತು ವಿವರಿಸಿದರು. ಸವಣೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ಅರಗೋಳ, ಕಾರಡಗಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ನಿರ್ದೇಶಕರಾದ ಎಲ್.ಸಿ. ಕುರವತ್ತಿ, ಬಸಟೆಪ್ಪ ಅತ್ತಿಗೇರಿ, ಸಿದ್ದು ಕಾಳಶೆಟ್ಟಿ, ಪ್ರಾಚಾರ್ಯ ಸಿ.ಸಿ. ಪಾಟೀಲ, ಮುಖ್ಯಗುರು ವಿ.ಎಚ್. ಸಣ್ಣಶಿವಣ್ಣನವರ, ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ಯೋಗೇಂದ್ರ ಜಂಬಗಿ, ಸೋನಿಯಾ ಮೇಟಿ, ಮಧುಕರ ಜಾಲಿಹಾಳ, ಕೃಷ್ಣ ಭೋವಿ ಪಾಲ್ಗೊಂಡಿದ್ದರು.

ಶಿಕ್ಷಕಿಯರಾದ ಸವಿತಾ ದೇಸಾಯಿ ಹಾಗೂ ಶಾರದಾ ಮುರಾರಿ ಕಾರ್ಯಕ್ರಮ ನಿರ್ವಹಿಸಿದರು.ರಟ್ಟೀಹಳ್ಳಿಯಲ್ಲಿ ಇ- ಖಾತಾ ಅಭಿಯಾನಕ್ಕೆ ಚಾಲನೆ

ರಟ್ಟೀಹಳ್ಳಿ: ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹೊಸ ನಿಯಮದಡಿ ಇ ಖಾತಾ ನೀಡಲಾಗುತ್ತಿದ್ದು, ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ನೀಡಿ ಇ- ಖಾತಾ ಪಡೆಯಬಹುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಇ- ಖಾತಾ ಭಿತ್ತಿಪತ್ರ ಬಿಡುಗಡೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅನೇಕ ವರ್ಷಗಳಿಂದ ಇ ಖಾತಾ ಪಡೆಯಲು ಕಾನೂನಿನ ತೊಡಕಿತ್ತು. ಸರ್ಕಾರ ಕಾನೂನಿನ ತೊಡಕನ್ನು ಸಡಿಲಗೊಳಿಸಿದೆ. ಸಾರ್ವಜನಿಕರು ಇ ಖಾತಾ ಪಡೆಯಬಹುದು ಎಂದರು.ತಹಸೀಲ್ದಾರ್ ಕೆ. ಗುರುಬಸವರಾಜ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ರಾಜಕುಮಾರ ಹೇಂದ್ರೆ, ಪಿ.ಡಿ. ಬಸನಗೌಡ್ರ, ರವಿ ಮುದಿಯಪ್ಪನವರ, ವಿಜಯ ಅಂಗಡಿ, ಕಪೀಲ್ ಪೂಜಾರ, ಮಂಜು ಮಾಸೂರ ಮುಂತಾದವರು ಇದ್ದರು.