ಕೊಪ್ಪಳ: ಸಜ್ಜನರು ಸಹಕಾರ ತತ್ವದಡಿ ಸಂಘಟಿತರಾಗಿ ದುರ್ಜನರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಕರೆ ನೀಡಿದರು.
ಗದಗಿನ ಸಿದ್ದನಗೌಡರು ದೇಶಕ್ಕೆ ಸಹಕಾರ ತತ್ವದ ಮಹತ್ವವನ್ನು ಪರಿಚಯಿಸಿದರು. ಇಂದು ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅಸಹಾಯಕರ ಹಾಗೂ ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿದ್ದರೂ ಜನಸಾಮಾನ್ಯರಿಗೆ ಸುಲಭವಾಗಿ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಸಹಕಾರಿ ಕ್ಷೇತ್ರ ಬೆಳೆದಿದೆ ಎಂದರು.
ಬ್ಯಾಂಕುಗಳು ಜನರ ನೆರವಿಗೆ ನಿಲ್ಲಬೇಕು. ಸಾಲದ ಮೇಲಿನ ಬಡ್ಡಿ ಸರಳ ಹಾಗೂ ಕೈಗೆಟುಕುವಂತಿರಬೇಕು. ಸಹಕಾರಿ ಸಂಸ್ಥೆಗಳು ಸಹಕಾರ ತತ್ವದಡಿ ಜನರಿಂದ, ಜನರಿಗಾಗಿ ನಡೆಯಬೇಕು; ಜನರನ್ನು ಕಿತ್ತುಕೊಂಡು ತಿನ್ನುವ ವ್ಯವಸ್ಥೆಯಾಗಬಾರದು ಎಂದು ಹೇಳಿದರು.ಜಗತ್ತಿನ ಸೃಷ್ಟಿಯೇ ಸಹಕಾರ ತತ್ವದಡಿ: ಗವಿಶ್ರೀ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ದೇಹವೇ ಸಹಕಾರ ತತ್ವಕ್ಕೆ ಅತ್ಯುತ್ತಮ ಉದಾಹರಣೆ. ದೇಹದ ಎಲ್ಲ ಅಂಗಾಂಗಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವುದರಿಂದ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯವಾಗುತ್ತದೆ. ಹೃದಯವು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ತನ್ನ ಕೆಲಸ ಮಾಡುತ್ತದೆ. ಕೈ, ಕಾಲು, ಹೃದಯ ಸೇರಿದಂತೆ ದೇಹದ ಪ್ರತಿಯೊಂದು ಅಂಗವೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪರಸ್ಪರ ಸಹಕಾರವೇ ದೇಹದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದರು.
ಆನ್ಲೈನ್ ವೇದಿಕೆ ಸಂಸ್ಥಾಪಕ ಮಹೇಶ ಮಾಶಾಳ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಹಕಾರಿ ಮುಖಂಡ ರಮೇಶ ವೈದ್ಯ, ಅಮರೇಗೌಡ ಭಯ್ಯಾಪುರ, ವಿಜಯ ಬಿರದಾರ, ರಾಜಶೇಖರ ಆಡೂರು, ಪ್ರಕಾಶ ಆನಂದಳ್ಳಿ, ಉಪಾಧ್ಯಕ್ಷ ರಮೇಶ ಕವಲೂರು, ಮಲ್ಲಪ್ಪ ಕವಲೂರು, ಸಿಇಒ ಶಶಿಕುಮಾರ ಗಡ್ಡಿ ಉಪಸ್ಥಿತರಿದ್ದರು.