ಬ್ಯಾಡಗಿ: ನಿಸರ್ಗದ ಜತೆ ನಾವು ಕೈಜೋಡಿಸಿ, ಗುಣಮಟ್ಟದ ಆಹಾರ ಉತ್ಪಾದನೆ ಮೂಲಕ ಮೌಲ್ಯವರ್ಧನೆ ಬೆಳೆಯತ್ತ ಮುಖಮಾಡಿದಲ್ಲಿ ಕೃಷಿ ಆರ್ಥಿಕವಾಗಿ ಲಾಭ ಒದಗಿಸಲಿದ್ದು, ನಾವು ರಾಸಾಯನಿಕ ಗೊಬ್ಬರ ಬಳಕೆಯಿಂದ ದೂರ ಸರಿಯುವ ಕಾಲ ಬಂದಿದೆ ಎಂದು ನೈಸರ್ಗಿಕ ಕೃಷಿಕ ಜಯಚಂದ್ರ ಶರ್ಮಾ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹೋರಾಟದ ಜತೆ ನಾವು ರೈತರಿಗೆ ನೈಸರ್ಗಿಕ ಕೃಷಿಯೊಂದಿಗೆ ಜೀವನ ನಡೆಸುವ ಪದ್ಧತಿಗೆ ಒತ್ತು ನೀಡುತ್ತಿದ್ದೇವೆ. ನಮ್ಮ ಹಿರಿಜೀವಿ ರೈತರು ನಯಾಪೈಸೆ ಸಾಲವಿಲ್ಲದೆ, ಶತಾಯುಷಿಗಳಾಗಿ ಜೀವನ ನಡೆಸಿದ್ದು ನಮ್ಮ ಕಣ್ಮುಂದಿದೆ. ಆಧುನಿಕ ಸೌಲಭ್ಯಗಳಿದ್ದರೂ ನಾವು ಸಾಲಗಳ ಸುಳಿಯಲ್ಲಿ ಸಿಲುಕಿದ್ದೇವೆ. ಬೀಜ ಸಂರಕ್ಷಣೆ ಪದ್ಧತಿ ಮರೆತಿದ್ದೇವೆ.ಹಾವೇರಿಯಲ್ಲಿ ರಾಜ್ಯದ ದೊಡ್ಡ ನೈಸರ್ಗಿಕ ಬೆಳೆಗಾರರ ಸಂತೆ ಜರುಗಿಸಲು ರೈತರನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಹಾವೇರಿ ಜಿಲ್ಲೆಯ ರೈತರು ತೀವ್ರ ಬರಗಾಲಕ್ಕೆ ಸಿಲುಕಿದ್ದು ಮಳೆ-ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಆದರೆ ಹಾವೇರಿ ಬರಗಾಲ ಪಟ್ಟಿಯಿಂದ ಕೈಬಿಡಲಾಗಿದ್ದು, ಜಿಲ್ಲೆಯ ಸಚಿವರು, ಶಾಸಕರು ರೈತರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಸಿಗದಂತಾಗಿದೆ. ಬೆಳೆವಿಮೆ, ಬೆಳೆಪರಿಹಾರ ಬಿಡುಗಡೆಯಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲದಿನಗಳಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.