ಕ್ರಾಂತಿಕಾರಿ ಬದಲಾವಣೆಗೆ ಸಂಕಲ್ಪ ಮಾಡೋಣ: ಶಾಸಕ ಎಚ್.ಕೆ. ಪಾಟೀಲ

KannadaprabhaNewsNetwork |  
Published : Aug 08, 2026, 02:15 AM IST
ಕಾರ್ಯಕರ್ತರನ್ನು ಉದ್ದೇಶಿಸಿ ಗದಗ ಶಾಸಕ ಎಚ್.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಈ ಅದ್ಧೂರಿ ಸ್ವಾಗತ ನನಗೆ ನೈತಿಕ ಧೈರ್ಯ ಮತ್ತು ಸ್ಥೈರ್ಯವನ್ನು ತಂದುಕೊಟ್ಟಿದೆ. ನನ್ನನ್ನು ಅಪಾರವಾಗಿ ಪ್ರೀತಿಸುವ ಕಾರ್ಯಕರ್ತರು ಹಾಗೂ ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆ ಮತ್ತು ಪಾರದರ್ಶಕತೆ ಬಯಸುವ ಮನಸ್ಸುಗಳಿಗೆ ನೋವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು.

ಗದಗ: ಜಿಲ್ಲೆಯು ರಚನಾತ್ಮಕ ಕಾರ್ಯಗಳಿಗೆ ಹೆಸರುವಾಸಿಯಾಗಿದೆ. ರಾಜಕೀಯ ಕಾರ್ಯಕರ್ತರನ್ನು ಸೇವಾ ಕ್ಷೇತ್ರಕ್ಕೆ ತೊಡಗಿಸಿದ ಮೊದಲ ಕ್ಷೇತ್ರ ಗದಗ. ಸೇವೆಯ ಮೂಲಕ ಜನರನ್ನು ತಲುಪಿ, ಮುಂದಿನ 100 ದಿನಗಳಲ್ಲಿ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗುವಂತೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡೋಣ ಎಂದು ಗದಗ ಶಾಸಕ ಎಚ್. ಕೆ. ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.

ಶುಕ್ರವಾರ ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಅದ್ಧೂರಿ ಸ್ವಾಗತ ನನಗೆ ನೈತಿಕ ಧೈರ್ಯ ಮತ್ತು ಸ್ಥೈರ್ಯವನ್ನು ತಂದುಕೊಟ್ಟಿದೆ. ನನ್ನನ್ನು ಅಪಾರವಾಗಿ ಪ್ರೀತಿಸುವ ಕಾರ್ಯಕರ್ತರು ಹಾಗೂ ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆ ಮತ್ತು ಪಾರದರ್ಶಕತೆ ಬಯಸುವ ಮನಸ್ಸುಗಳಿಗೆ ನೋವಾಗಿದೆ. ಅವರೆಲ್ಲರ ಪ್ರೀತಿ ಮತ್ತು ಗೌರವಕ್ಕೆ ನಾನು ತಲೆಬಾಗುತ್ತೇನೆ. ಕಾಂಗ್ರೆಸ್ ಪಕ್ಷವು ನನ್ನ ಸಾರ್ವಜನಿಕ ಜೀವನವನ್ನು ಪೋಷಿಸಿ ಬೆಳೆಸಿದೆ. ಇದಕ್ಕಾಗಿ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ವರಿಷ್ಠರಿಗೆ ಚಿರಋಣಿಯಾಗಿದ್ದೇನೆ ಎಂದರು.

ಸೇವಾ ಕ್ಷೇತ್ರವು ಅತ್ಯಂತ ವಿಶಾಲವಾಗಿದ್ದು, ಅದಕ್ಕೆ ಯಾವುದೇ ಮಿತಿ ಇಲ್ಲ. ಜನಸೇವೆಗೆ ಮಂತ್ರಿ ಸ್ಥಾನವೇ ಬೇಕೆಂದೇನೂ ಇಲ್ಲ. ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು, ಸ್ವಾವಲಂಬಿ ಹಾಗೂ ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಲು ಪಕ್ಷದ ತತ್ವ- ಸಿದ್ಧಾಂತಗಳಡಿ ಕಾರ್ಯನಿರ್ವಹಿಸೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಇದೇ ವೇಳೆ ತಮ್ಮ ಬೆಂಬಲಕ್ಕೆ ನಿಂತು ಗದಗ- ಬೆಟಗೇರಿ ನಗರಸಭೆ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುವಂತೆ ಸದಸ್ಯರಲ್ಲಿ ಮನವಿ ಮಾಡಿದರು. ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ. ಆರ್. ಪಾಟೀಲ ಮಾತನಾಡಿ, ಕಾರ್ಯಕರ್ತರು ಧೈರ್ಯಗೆಡದೆ ಕಾಂಗ್ರೆಸ್ ಸಿದ್ಧಾಂತಗಳ ಮೂಲಕ ಜನಸೇವೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಾಸಣ್ಣ ಕುರಡಗಿ, ಸುರಪುರ, ಚನ್ನವೀರಪ್ಪ ಮಳಗಿ, ಸುಜಾತಾ ದೊಡ್ಡಮನಿ, ಬಸವರಾಜ ಕಡೇಮನಿ, ನೀಲಮ್ಮ ಬೋಳನವರ, ಸೈಯದ್ ಖಾಲೀದ ಕೊಪ್ಪಳ, ಭರಕತ ಅಲಿ ಮುಲ್ಲಾ, ಕೃಷ್ಣಾ ಪರಾಪೂರ, ಶ್ರೀನಿವಾಸ ಹುಯಿಲಗೋಳ ಮುಂತಾದವರು ಉಪಸ್ಥಿತರಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಬಿ. ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಎಸ್.ಎನ್. ಬಳ್ಳಾರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ