- ನಾಡಪ್ರಭುಗಳ 516ನೇ ಜಯಂತಿಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸಲಹೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರು ನಿರ್ಮಾತೃ ಎನಿಸಿರುವ ನಾಡಪ್ರಭು ಕೆಂಪೇಗೌಡರು ಮೊದಲು ಯಲಹಂಕಕ್ಕೆ ಬಂದು, ನಂತರ ಮಾಗಡಿಗೆ ಬಂದರು. ಪೇಟೆಗಳನ್ನು ನಿರ್ಮಿಸಿ, ವಾಣಿಜ್ಯ ವಹಿವಾಟುಗಳು, ಕುಶಲಕರ್ಮಿಗಳ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟರು. ಕೆಂಪೇಗೌಡರ ರೀತಿ ವೈಜ್ಞಾನಿಕ ತಳಹದಿ ಮೇಲೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲ್ಲಿಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ನಾಂದಿ ಹಾಡಿ ಕಟ್ಟಿದ ನಾಡು ಬೆಂಗಳೂರು. ಇಂದು ಕರ್ನಾಟಕದ ಶೇ.50ರಷ್ಟು ಆರ್ಥಿಕ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಹಾಗಾಗಿ ವಿದ್ಯಾರ್ಥಿಗಳು ಕೆಂಪೇಗೌಡರ ಸಾಧನೆ ಹಾದಿ, ಸ್ಪಷ್ಟ ಮುಂದಾಲೋಚನೆ, ದೂರದೃಷ್ಟಿತ್ವವನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಬೆಂಗಳೂರಿನಲ್ಲಿ ಕೆಂಪೇಗೌಡರು ಸುಮಾರು 26 ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ನಿರ್ಮಿಸುವ ಪೇಟೆಗಳು ಯಾವುದೇ ಟ್ರಾಫಿಕ್ ಆಗದಂತೆ ಜಾಗೃತಿ ವಹಿಸಿದ್ದಾರೆ. ಸಿಂಧೂ ನಾಗರಿಕತೆ ಪ್ಲಾನ್ ಪ್ರಕಾರ ಬೆಂಗಳೂರನ್ನು ನಿರ್ಮಾಣ ಮಾಡಿದ್ದರು ಎಂದರು.ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಡಿಡಿಪಿಐ ಕೊಟ್ರೇಶ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಬಿಇಒ ಪುಪ್ಪಾಲತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.
- - -(ಬಾಕ್ಸ್) * ಸುಂದರ, ಸೌಹಾರ್ದ, ವಾಣಿಜ್ಯನಗರಿ ನಿರ್ಮಾತೃಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕೆಂಪೇಗೌಡರು ಉತ್ತಮ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆಗಳನ್ನು ಕಟ್ಟಿಸಿದರು. ಮಾರುಕಟ್ಟೆಗಳನ್ನು ತೆರೆದರು. ಆ ಮೂಲಕ ಸುಂದರ, ಸೌಹಾರ್ದ ಹಾಗೂ ವಾಣಿಜ್ಯ ವ್ಯವಹಾರಗಳ ರಾಜ್ಯ ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣ ಎಂದು ತಿಳಿಸಿದರು.
ಬೆಂಗಳೂರು ಅಂದರೆ ನಮ್ಮ ಕಣ್ಣ ಮುಂದೆ ಬರುವ ಮೊದಲ ಚಿತ್ರಣ ಕೆಂಪೇಗೌಡರದು. ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲೆ ರಾಜ್ಯದ ಅಭಿವೃದ್ಧಿಗಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. ಆ ದೂರದೃಷ್ಟಿಯ ಆಲೋಚನೆಯಿಂದ ಭವಿಷ್ಯ ಬೆಂಗಳೂರನ್ನು ಕಟ್ಟಿದ್ದಾರೆ. ಸಾಂಸ್ಕೃತಿಕ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿದ್ದರು. ಯಕ್ಷಗಾನ ಕೃತಿ ರಚಿಸಿದ್ದಾರೆ ಎಂದರು.- - -
-27ಕೆಡಿವಿಜಿ33:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.