ಬಂಜಾರ ಸಮುದಾಯ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲಿ: ಬಸವಲಿಂಗೇಶ್ವರ ಸ್ವಾಮೀಜಿ

KannadaprabhaNewsNetwork |  
Published : Mar 24, 2026, 02:00 AM IST
ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ತಾಂಡಾದಲ್ಲಿ ಸಂತ ಸೇವಾಲಾಲ ಜಯಂತಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಯಿತು. | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ತಾಂಡಾದಲ್ಲಿ ಬಂಜಾರ ಸಮಾಜದ ವತಿಯಿಂದ ಸೋಮವಾರ ಸಂತ ಸೇವಾಲಾಲರ ಜಯಂತಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಯಿತು.

ಯಲಬುರ್ಗಾ: ಬಂಜಾರ ಸಮುದಾಯದವರು ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ತಾಂಡಾದಲ್ಲಿ ಬಂಜಾರ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಜಯಂತಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸಂತ ಸೇವಾಲಾಲ ಮಹಾರಾಜರ ತತ್ವ-ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಬಂಜಾರ ಸಮಾಜದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಬಂಜಾರ ಸಮಾಜಕ್ಕೆ ಸಂತ ಸೇವಾಲಾಲ್ ಕೊಡುಗೆ ಅಪಾರ. ಈ ಸಮುದಾಯ ವಿಶಿಷ್ಟ ಆಚರಣೆ ಪರಂಪರೆ ಹೊಂದಿದ್ದು, ಇತರ ಸಮುದಾಯಗಳಿಗೆ ಮಾದರಿಯಾಗಿದೆ. ಕಾಯಕ ಯೋಗಿಗಳಂತೆ ದುಡಿದು ಬಂಜಾರ ಸಮಾಜದವರು ತಮ್ಮದೇ ಆದ ಸೇವೆ ಸಮಾಜಕ್ಕೆ ನೀಡಿದ್ದಾರೆ ಎಂದರು.

ತಾಪಂ ಮಾಜಿ ಸದಸ್ಯ ಪರಸಪ್ಪ ನಾಯಕ ಮಾತನಾಡಿ, ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು‌. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಗೊಳ್ಳಬೇಕಾದರೆ ಸರ್ಕಾರ ಸಮುದಾಯಕ್ಕೆ ವಿಶೇಷ ಅನುದಾನ ನೀಡಬೇಕು ಎಂದರು.

ಅದ್ಧೂರಿ ಮೆರವಣಿಗೆ: ಚಿಕ್ಕಮ್ಯಾಗೇರಿ ತಾಂಡಾದಲ್ಲಿ ಸೇವಾಲಾಲ ಜಯಂತಿ ಹಾಗೂ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ತ ಬಂಜಾರ ಸಮಾಜದ ಮಹಿಳೆಯರಿಂದ ಕುಂಭ ಕಳಸದ ಅದ್ಧೂರಿ ಮೆರವಣಿಗೆ ನಡೆಯಿತು. ಲಂಬಾಣಿಗರ ಜನಪದ ಹಾಡುಗಳಿಗೆ ಸಮಾಜದ ಯುವತಿ-ಯುವಕರು ನೃತ್ಯ, ಸಾಂಪ್ರದಾಯಿಕ ಬಟ್ಟೆ ತೊಟ್ಟು ಹೆಜ್ಜೆ ಹಾಕಿದ್ದು, ನೋಡುಗರ ಗಮನ ಸೆಳೆಯಿತು. ಶ್ರೀ ದುರ್ಗಾದೇವಿ ಮೂರ್ತಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು.

ತಾ‌ಪಂ ಮಾಜಿ ಸದಸ್ಯ ಟೋಪಣ್ಣ ನಾಯಕ, ರಾಮಣ್ಣ ನಾಯಕ, ದೇವಪ್ಪ ಪೂಜಾರ, ಉಮೇಶ ನಾಯಕ, ಈರಪ್ಪ ರಾಠೋಡ, ಕೃಷ್ಣ ನಾಯಕ, ತಿರುಪತಿ ನಾಯಕ, ಮುತ್ತಪ್ಪ ಮೇಸಣಗೇರಿ, ರಾಮಪ್ಪ ನಾಯಕ, ಶೇಖಪ್ಪ ಚವ್ಹಾಣ, ರತ್ನಪ್ಪ ನಾಯಕ, ನೀಲಪ್ಪ ಕಾರಬಾರಿ, ಲಿಂಬಪ್ಪ ಹಾಗೂ ಸಮಾಜದ ಗುರು-ಹಿರಿಯರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸತ್ಯದ ಜೊತೆ ದೈವ ಶಕ್ತಿ ಸದಾ ಇರುತ್ತದೆ: ರಂಭಾಪುರಿ ಸ್ವಾಮೀಜಿ
ನಮ್ಮ ಬೆಳೆಗಳ ಭದ್ರತೆಗೆ ಸೂಕ್ತ ಮಾರುಕಟ್ಟೆ ಬೇಕು: ನಗರದ ಮಹದೇವಪ್ಪ