ಶ್ರೀಲಂಕಾ, ಪಾಕಿಸ್ತಾನ ಸರ್ಕಾರಗಳನ್ನು ಬಿಜೆಪಿ ಬೀಳಿಸಲಿ: ಲಾಡ್‌

KannadaprabhaNewsNetwork | Published : Feb 3, 2024 1:49 AM

ಬಿಜೆಪಿಗರು ಸರ್ಕಾರ ಪತನಗೊಳಿಸುವಲ್ಲಿ ನಿಸ್ಸೀಮರು. ಶ್ರೀಲಂಕಾ, ಪಾಕಿಸ್ತಾನದ ಸರ್ಕಾರಗಳನ್ನೇ ಬೀಳಿಸಲಿ ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂದು ಸರ್ಕಾರ ಪತನ ಆಗುತ್ತೆ ಎಂದು ಹೇಳಿ ಹೋಗುತ್ತಾರೆ. ಇವರಷ್ಟೇ ಅಲ್ಲ, ಬಿಜೆಪಿಗರೆಲ್ಲರೂ ಬರೀ ಇದನ್ನೇ ಹೇಳುವುದು ಆಗಿದೆ. ಅವರಿಗೆ ಈ ಮಾತನ್ನು ಹೇಳುವುದು ಬಿಟ್ಟು ಬೇರೆ ಕೆಲಸವೇ ಇಲ್ಲದಂತಾಗಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು 136 ಶಾಸಕರಿದ್ದೇವೆ. ಅವರಿಗೆ ಇನ್ನು 53 ಶಾಸಕರು ಬೇಕು, ಆಗಷ್ಟೇ ಸಮನಾಗುತ್ತಾರೆ. ಅದ್ಹೇಗೆ ಬೀಳಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಬರೀ ಸರ್ಕಾರ ಪತನ ಎಂಬ ಮಾತೇ ಆಯಿತು. ಬಿಜೆಪಿಗರು ಸರ್ಕಾರ ಪತನಗೊಳಿಸುವಲ್ಲಿ ನಿಸ್ಸೀಮರು. ಶ್ರೀಲಂಕಾ, ಪಾಕಿಸ್ತಾನದ ಸರ್ಕಾರಗಳನ್ನೇ ಬೀಳಿಸಲಿ ಎಂದರು.

ದಕ್ಷಿಣ ಭಾರತದ ರಾಜ್ಯಗಳಿಗೆ 2014ರ ಮುಂಚೆ ಎಷ್ಟು ಅನುದಾನ ಬರುತ್ತಿತ್ತೋ ಅಷ್ಟು ಅನುದಾನ ಈಗ ಬರುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ ಹೇಳಿದ್ದಾರೆ. ಇದು ಸರಿಯಾಗಿದೆ. ಆದರೆ, ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬಗ್ಗೆ ಅವರೇ ಉತ್ತರಿಸುತ್ತಾರೆ. ಅವರನ್ನೇ ಕೇಳಿ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಡಿ.ಕೆ. ಸುರೇಶ ಹೇಳಿದ್ದರಲ್ಲಿ ಲಾಜಿಕ್‌ ಇದೆ. ದಕ್ಷಿಣದ ರಾಜ್ಯಗಳಿಗೆ ಬರುವ ದುಡ್ಡು ಕಡಿಮೆಯಾಗಿದೆ. ನಮಗೆ ಬರಬೇಕಾದ ದುಡ್ಡು ಬರುತ್ತಿಲ್ಲ. ನಮ್ಮ ಹಣ ತೆಗೆದುಕೊಂಡು ಉತ್ತರ ಭಾರತದ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು.

ಇನ್ನು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಡಿ.ಕೆ. ಸುರೇಶ ಹೇಳಿದ್ದಾರೆ. ಅದು ಸರಿಯೋ ತಪ್ಪೋ ಎಂಬುದನ್ನು ಅವರನ್ನೇ ಉತ್ತರ ಕೇಳಿ ಎಂದರು.

ಹಾಗೆ ನೋಡಿದರೆ ಬಿಜೆಪಿಗರು ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಆ ಬಗ್ಗೆ ಚರ್ಚೆಯಾಗಬೇಕು. ಹತ್ತು ವರ್ಷದಲ್ಲಿ ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಗ್ಗೆ ಅವರು ಉತ್ತರಿಸಲಿ ಎಂದರು.

10 ವರ್ಷದಲ್ಲಿ ಇವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಲಿ. ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರವಿತ್ತು. ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ ಎಂದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಇದ್ದರು.

ಗ್ಯಾರಂಟಿ ಯೋಜನೆಗಳ ಜಾಗೃತಿ ಸಮಾವೇಶ

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಸೇರಿಕೊಂಡು ಜಾಗೃತಿ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಸಮಾವೇಶ ನಡೆಸಲಾಗುವುದು. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಕಾರ್ಯಕ್ರಮ ಫೆ. 24ರಂದು ಮಾಡಬೇಕು ಎಂದು ಯೋಚಿಸಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಸಮಯ ಕೇಳಲಾಗುತ್ತಿದೆ. ಅವರು ದಿನಾಂಕ ಕೊಟ್ಟ ಮೇಲೆ ನಿಗದಿಪಡಿಸಲಾಗುವುದು. ಆಗ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಸೇರಿಸಲಾಗುವುದು ಎಂದರು.

ಫೆ. 3ರಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ್ ಅಬ್ಬಯ್ಯ ಕ್ಷೇತ್ರದ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 20 ಸಾವಿರಕ್ಕೂ ಅಧಿಕ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 5ರಂದು ಶಾಸಕರಾದ ಅರವಿಂದ ಬೆಲ್ಲದ ಮತ್ತು ವಿನಯ ಕುಲಕರ್ಣಿ ಕ್ಷೇತ್ರದ ಫಲಾನುಭವಿಗಳ ಕಾರ್ಯಕ್ರಮ ಆಯೋಜಿಸಲಾಗುವುದು.

ಮುಂದಿನ ದಿನಗಳಲ್ಲಿ ನವಲಗುಂದ, ಕುಂದಗೋಳ, ಕಲಘಟಗಿ ಹೀಗೆ ಪ್ರತಿ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.