ಗದಗ: ಪಂಚಾಯತ್ ರಾಜ್ ಆಡಳಿತವು ಸರ್ವ ಜನಾಂಗ ಒಳಗೊಂಡಂತೆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆ ಆಗಿದ್ದು, ಪಂಚಾಯತ್ ರಾಜ್ ಆಡಳಿತ ಸಾಮಾಜಿಕ ಸಮಾನತೆಯ ಬಾಗಿಲು ಇದ್ದಂತೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕೆ. ಸತೀಶ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪಂಚಾಯತ ರಾಜ್ ಪ್ರತಿಯೊಬ್ಬ ವ್ಯಕ್ತಿಗೆ ಸಮಾನತೆಯನ್ನು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆಯನ್ನು ಒದಗಿಸುವ ಮಾರ್ಗವಾಗಿದೆ. ದಲಿತರ ಅಭಿವೃದ್ಧಿಗೆ ಪಂಚಾಯಿತಿ ಮಟ್ಟದಲ್ಲಿ ಎಸ್ಸಿ, ಎಸ್ಟಿ ಗ್ರಾಮ ಸಭೆ ಆಯೋಜನೆ ಮಾಡುವುದು ಅವಶ್ಯ. ಅಲ್ಲದೇ ಶೋಷಿತ ಜನಾಂಗ ಕೀಳರಿಮೆಯಿಂದ ಹೊರಬಂದು ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವಂತಾದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಶೋಷಿತ ಸಮುದಾಯದ ವಿಮೋಚನೆ ಶಿಕ್ಷಣದಲ್ಲಿ ಅಡಗಿದೆ. ಪ್ರತಿಯೊಬ್ಬ ಶೋಷಿತನು ಶಿಕ್ಷಣಕ್ಕೆ ಮಹತ್ವವನ್ನು ನೀಡುವಂತಾಗಬೇಕು. ಹಾಗಾದಾಗ ಮಾತ್ರ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಪಂಚಾಯಿತಿಯಲ್ಲಿರುವ ಯೋಜನೆಗಳನ್ನು ಪಡೆಯುವುದರ ಜತೆಗೆ ಯೋಜನೆಗಳ ಫಲಾನುಭವಿಗಳಾಗದೆ ಪಾಲುದಾರರಾಗಬೇಕು. ಆರ್ಥಿಕ ಭದ್ರತೆಗೆ ಪೂರಕವಾಗುವಂತಹ ಯೋಜನೆಗಳ ಕಡೆಗೆ ಗಮನ ಹರಿಸಲು ಸ್ವಾವಲಂಬಿ ಜೀವನ ನಡೆಸಿ ಎಂದರು.ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ, ರಾಜ್ಯ ಸಂಘಟನಾ ಸಂಚಾಲಕ ಹನಮಂತಪ್ಪ ಕಾಕರಗಲ್ಲ ಹಾಗೂ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ ಕ್ರಾಂತಿಗೀತೆ ಹಾಡಿದರು. ಬಸವರಾಜ ಕಡೇಮನಿ ಸ್ವಾಗತಿಸಿದರು. ಮುತ್ತು ಮಾದರ ನಿರೂಪಿಸಿದರು. ನಾಗರಾಜ ಗುತ್ತಿ ವಂದಿಸಿದರು.