ಮಹೇಶ ಛಬ್ಬಿ
ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 21 ಜಿಲ್ಲೆಯ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಮೈಸೂರು, ಬೆಂಗಳೂರು ಹೀಗೆ ಹಲವು ಜಿಲ್ಲೆಗಳಿಂದ 200ಕ್ಕಿಂತ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಲಿದ್ದು, 14 ವರ್ಷದೊಳಗಿನ, 16 ವರ್ಷದೊಳಗಿನ ಸೈಕ್ಲಿಸ್ಟ್ಗಾಗಿ ಜೂನಿಯರ್ ಹಾಗೂ ಎಲೈಟ್ ವಿಭಾಗದಲ್ಲಿ ಬಾಲಕರ ಹಾಗೂ ಬಾಲಕಿಯರ ಸ್ಪರ್ಧೆ ನಡೆಯಲಿದೆ.
ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರೇಸಿಂಗ್ ಸೈಕಲ್ಗಳದ್ದೇ ಹಾವಳಿ. ಸ್ಪರ್ಧೆಯ ಸಲುವಾಗಿ ಹೊರ ಜಿಲ್ಲೆಗಳಿಂದ ಬಂದ ಸೈಕಲ್ಗಳು ಜತೆಗೆ ಈ ಕ್ರೀಡೆಯಿಂದ ಪ್ರೇರಿತರಾಗಿ ಪಾಲಕರಿಗೆ ದುಂಬಾಲು ಬಿದ್ದು ತೆಗೆದುಕೊಂಡ ಹೊಸ ಸೈಕಲ್ಗಳು ಸೇರಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಸೈಕಲ್ಗಳೇ ಕಾಣುವಂತಾಗಿದೆ. ಇದರಿಂದ ಪಟ್ಟಣದ ಕಳೆ ಹೆಚ್ಚಿದೆ.ಬೆಲೆ ಬಾಳುವ ಸೈಕಲ್ಸ್: ಸ್ಪರ್ಧೆಗೆಯೆಂದೆ ತಯಾರಿಸಲಾದ ಈ ಸೈಕಲ್ಗಳಲ್ಲಿ ವಿಶೇಷವಾಗಿ ಸ್ಪೀಡೋಮೀಟರ್, ಗೇರ್ಬಾಕ್ಸ್, ಹಾರ್ಟಬೀಟ್ ತೋರಿಸುವ ವಿನೂತನ ಮಾದರಿಯಲ್ಲಿವೆ. ಇವುಗಳ ಬೆಲೆ ಕೇಳಿದರೆ ನಮ್ಮ ಜಿಲ್ಲೆಯ ಜನರಿಗೆ ಒಂದು ಕ್ಷಣ ದಂಗಾಗದೇ ಇರದು. ಇವುಗಳ ಬೆಲೆ ಕನಿಷ್ಠ ₹7.5 ಲಕ್ಷದಿಂದ ಪ್ರಾರಂಭವಾಗುತ್ತದೆ. ಇಂತಹ ಸೈಕಲ್ಗಳು ಈಗ ಸದ್ಯ ಪಟ್ಟಣದಲ್ಲಿ ನೋಡಲು ಸಿಗುತ್ತವೆ.
ಟ್ರ್ಯಾಕ್ ಸಿದ್ಧತೆ: ಮೌಂಟೇನ್ ಸೈಕಲ್ ಸ್ಫರ್ಧೆಗೆ ಕೆಂಪು ಮಣ್ಣಿನ ಗುಡ್ದಗಾಡು ಪ್ರದೇಶದಲ್ಲಿ ಇಳಿಜಾರು, ಏರಿಳಿತಗಳಿರುವ, ಕಲ್ಲುಮಣ್ಣಿನ ಹಾದಿಯನ್ನು ರೋಮಾಂಚನಕಾರಿ ಟ್ರ್ಯಾಕ್ ನಿರ್ಮಿಸಲು ಆಯೋಜಕರು ಹಾಗೂ ತರಬೇತಿ ಪಡೆದ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಕ್ರೀಡಾಪಟುಗಳು ಪ್ರ್ಯಾಕ್ಟೀಸ್ಗೆ ಮುಂದಾಗುತ್ತಿದ್ದಾರೆ. ತರಬೇತಿ ಪಡೆದ ಈ ಕ್ರೀಡಾಪಟುಗಳ ಸ್ಪರ್ಧೆಯನ್ನು ನೋಡುವುದೇ ರೋಮಾಂಚನ. ಇದರಿಂದ ಪಟ್ಟಣ ಒಳಗೊಂಡಂತೆ ಸುತ್ತಮುತ್ತಲ ಗ್ರಾಮಗಳಿಂದ ಮಕ್ಕಳಿಗೆ ಪ್ರೇರಣೆಯಾಗಿ ಬಂದು ನೋಡುವಂತಾಗಿದೆ.
ಮಾದರಿ ಜಿಲ್ಲೆ: ರಾಜ್ಯದಲ್ಲಿ ಗದಗ ಜಿಲ್ಲೆಯನ್ನು ಸೈಕ್ಲಿಂಗ್ನಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಈ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಮಕ್ಕಳನ್ನು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದೇವೆ ಎಂದು ಗದಗ ಸೈಕ್ಲಿಂಗ್ ಅಸೋಶಿಯೇಶನ್ ಅಧ್ಯಕ್ಷ ಎಸ್.ವಿ. ಕಣವಿ ತಿಳಿಸಿದರು.