ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳನ್ನು, ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ನೋಂದಾಯಿತ ಸದಸ್ಯರು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ವಸತಿ ಸೌಲಭ್ಯ ಕಲ್ಪಿಸೋಣ ಎಂದು ಶಾಸಕ ಪಿ.ರವಿಕುಮಾರ್ ಸಲಹೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ವಸತಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಸೆ.15ರೊಳಗೆ ಸಮ್ಮೇಳನದ ನೋಂದಣಿ ಸಮಿತಿಯೊಂದಿಗೆ ಸಭೆ ನಡೆಸಿ ವಸತಿ ಕಲ್ಪಿಸಬಹುದಾದ ಹೋಟೆಲ್ಗಳು, ಸಮುದಾಯ ಭವನಗಳು, ಹಾಸ್ಟೆಲ್ಗಳು, ರೆಸಾರ್ಟ್ ಪಟ್ಟಿ ತಯಾರಿಸಲಾಗುವುದು. ಈ ಕೆಲಸಕ್ಕಾಗಿ ಪಿಡಿಒ, ಇಒಗಳು ಮತ್ತು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಬಳಸಿಕೊಳ್ಳಲಾಗುವುದು ಎಂದರು.
ಸಮ್ಮೇಳನಕ್ಕೆ ಬಂದವರನ್ನು ಮನೆ ಅತಿಥಿಯಾಗಿ ಉಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ನಗರದಲ್ಲಿ ರ್ಯಾಲಿಗಳನ್ನು ನಡೆಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್ ಮುಂತಾದ ಕಡೆ ಸಮ್ಮೇಳನದ ಲೋಗೋ ಒಳಗೊಂಡ ಫ್ಲೆಕ್ಸ್ ಗಳನ್ನು ಶೀಘ್ರವೇ ಅಳವಡಿಸಲಾಗುವುದು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸೂಚಿಸಲಾಗುವುದು ಎಂದರು.ಶಿಕ್ಷಣ, ಕಂದಾಯ ಇಲಾಖೆ ಮತ್ತು ಉಪ ಸಮಿತಿ ಸದಸ್ಯರನ್ನು ಬಳಸಿಕೊಂಡು ಸಾಧಕ ಬಾಧಕನ್ನು ನೋಡಿಕೊಂಡು ವಸತಿ ಪ್ರದೇಶಗಳನ್ನು ನಿರ್ಧರಿಸಲಾಗುವುದು. ಅದಕ್ಕೂ ಮುನ್ನ ಹೋಟೆಲ್ ಮಾಲೀಕರು, ಸಮುದಾಯ ಭವನಗಳ ಮಾಲೀಕರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಡಿಸೆಂಬರ್ 10ರೊಳಗೆ ನೋಂದಾಯಿಸಿದ ಸದಸ್ಯರಿಗೆ ಮಾತ್ರ ವಸತಿ ಕಲ್ಪಿಸಬಹುದು. ಮಂಡ್ಯ,ಮದ್ದೂರು, ಶ್ರೀರಂಗಪಟ್ಟಣ, ಮೈಸೂರು ಮುಂತಾದ ಕಡೆಗಳಲ್ಲಿ ಇರುವ ಹೋಟೆಲ್, ಸಮುದಾಯ ಭವನ, ಹಾಸ್ಟೆಲ್ಗಳು, ರೆಸಾರ್ಟ್ ಗಳನ್ನು ಗುರುತಿಸಲಾಗುವುದು ಎಂದರು.ಸಮ್ಮೇಳನಕ್ಕೆ ನೋಂದಣಿ ಮಾಡಿಸಿಕೊಂಡ ಸದಸ್ಯರಿಗೆ ವಸತಿ ವ್ಯವಸ್ಥೆ ನೀಡಲು ಮೂರು ದಿನ ಮುಂಚೆ ವಸತಿಗೆ ನಿಗದಿಪಡಿಸಿದ ಕಟ್ಟಡಗಳನ್ನು ಸಮಿತಿ ವಶಕ್ಕೆ ಪಡೆಯಬೇಕು ಎಂದರು.
ಸಮ್ಮೇಳನ ಸಮನ್ವಯ ಸಮಿತಿ ಸಂಚಾಲಕ ಮೀರಾ ಶಿವಲಿಂಗಯ್ಯ ಮಾತನಾಡಿ, ಹಾವೇರಿಯಲ್ಲಿ ಸಮ್ಮೇಳನದಲ್ಲಿ 10,000 ಜನಕ್ಕೆ ವಸತಿ ಕಲ್ಪಿಸಲಾಗಿತ್ತು. ಕಲಾತಂಡಗಳನ್ನು ಸಮುದಾಯ ಭವನಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಬಹುದು ಎಂದರು.ಸಭೆಯಲ್ಲಿ ಸಮಿತಿ ಸದಸ್ಯ ಟಿ.ಎಸ್.ಸತ್ಯಾನಂದ, ಮುಡಾ ಅಧ್ಯಕ್ಷ ನಯೀಂ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ಬೇಲೂರು ಸೋಮಶೇಖರ್, ಕುರುಬರ ಸಂಘದ ಅಧ್ಯಕ್ಷ ಸುರೇಶ್, ಎಚ್.ಕೆ. ರುದ್ರಪ್ಪ, ಸತ್ಯಪ್ಪ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್, ಧನಂಜಯ ದರಸಗುಪ್ಪೆ, ಎಲ್.ಕೃಷ್ಣ, ಸುನಿಲ್ ಕುಮಾರ್, ಹನುಮಂತಯ್ಯ,ದೇವರಾಜು ಕೊಪ್ಪ ಮುಂತಾದವರು ಹಾಜರಿದ್ದರು.