ಹರಪನಹಳ್ಳಿ: ಕಾಂತರಾಜ ವರದಿ ವೈಜ್ಞಾನಿಕ ಸಮೀಕ್ಷೆಯಾಗಿದ್ದು, ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಜ. 28ರಂದು ಆಯೋಜಿಸಿರುವ ಅಹಿಂದ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ದಾವಣಗೆರೆ ಜಿಲ್ಲಾ ಅಹಿಂದ ಮುಖಂಡ ಹೊದಿಗೇರಿ ರಮೇಶ ತಿಳಿಸಿದರು.
ಹೋರಾಟದಿಂದ ನ್ಯಾಯ ಪಡೆಯುವುದು ಅನಿವಾರ್ಯವಾಗಿದೆ. ಹಕ್ಕೊತ್ತಾಯ ಮಂಡನೆ ನಮ್ಮ ಕರ್ತವ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಬಲ ತುಂಬಬೇಕಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಜ. 28ರ ಚಿತ್ರದುರ್ಗ ಸಮಾವೇಶ ಯಾರ ವಿರುದ್ಧವೂ ಅಲ್ಲ. ಶೋಷಿತ ಸಮಾಜಗಳಿಗೆ ನ್ಯಾಯ ಸಿಗಲಿ ಎಂಬುದಾಗಿದೆ. ಕಾಂತರಾಜ ವರದಿ ಬಿಡುಗಡೆಯಾಗಿಲ್ಲ. ಅದರೊಳಗೆ ಏನಿದೆ ಗೊತ್ತಿಲ್ಲ, ಆದರೆ ವರದಿ ಬಗ್ಗೆ ವಿರೋಧ ಸಲ್ಲ ಎಂದರು.ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ ಮಾತನಾಡಿ, ಜ. 28ರ ಚಿತ್ರದುರ್ಗ ಸಮಾವೇಶ ಅರ್ಥಗರ್ಭಿತ ಹಾಗೂ ಮಹತ್ವಪೂರ್ಣವಾಗಿದ್ದು, ನೂರಾರು ಕೋಟಿ ಖರ್ಚು ಮಾಡಿ ಸರ್ಕಾರ ನಡೆಸಿರುವ ಸಮೀಕ್ಷೆ ಅವೈಜ್ಞಾನಿಕ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಮುಖಂಡರಾದ ವೀರೇಶನಾಯ್ಕ, ಶಿವಕುಮಾರ ಒಡೆಯರ್, ಎಚ್.ಬಿ. ಪರಶುರಾಮಪ್ಪ, ಆಲದಹಳ್ಳಿ ಷಣ್ಮುಖಪ್ಪ, ವಕೀಲ ಗೋಣಿಬಸಪ್ಪ, ಹಲಗೇರಿ ಮಂಜಪ್ಪ, ಮೇಘರಾಜ, ಗುಂಡಗತ್ತಿ ಕೊಟ್ರಪ್ಪ, ಮೈದೂರು ರಾಮಣ್ಣ, ಹೇಮಣ್ಣ ಮೋರಗೇರಿ, ಎನ್. ಶಂಕರ, ಇಸ್ಮಾಯಿಲ್ ಎಲಿಗಾರ ಮಾತನಾಡಿದರು.