ಬಳ್ಳಾರಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಹೀಗಾಗಿ ಮರಗಳನ್ನು ಬೆಳೆಸುವ ಪರಿಪಾಠ ಹೆಚ್ಚಾಗಬೇಕು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಹೀಗಾಗಿ ಮರಗಳನ್ನು ಬೆಳೆಸುವ ಪರಿಪಾಠ ಹೆಚ್ಚಾಗಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿಯ ವೀ.ವಿ ಸಂಘದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳ್ಳಾರಿ ಬಿಸಿಲೂರು ಎಂದೇ ಖ್ಯಾತಿಯಾಗಿದೆ. ಈ ಊರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇತ್ತೀಚೆಗೆ ಜನರಲ್ಲಿ ಪರಿಸರ ಪ್ರಜ್ಞೆ ಹೆಚ್ಚಾಗುತ್ತಿದ್ದು ನಗರದ ಅನೇಕ ಸಂಘಟನೆಗಳು ಗಿಡಗಳನ್ನು ನೆಟ್ಟು ಪೋಷಿಸುವ ಕಾಳಜಿ ಕಾರ್ಯ ಮಾಡುತ್ತಿವೆ ಎಂದು ಸ್ಮರಿಸಿದರು.
ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರ ಪ್ರೇಮ ಮೂಡಿಸುವ ಕೆಲಸ ಶಿಕ್ಷಕ ಸಮುದಾಯ ಮಾಡಬೇಕು. ಪಠ್ಯದ ಜೊತೆಗೆ ಗಿಡಗಳನ್ನು ನೆಟ್ಟು ಪೋಷಿಸುವುದು ಸೇರಿದಂತೆ ಇತರೆ ಚಟುವಟಿಕೆಯಲ್ಲಿ ತೊಡಗಿಸಬೇಕು. ಮಕ್ಕಳಲ್ಲಿ ಸಾಮುದಾಯಿಕ ಪ್ರಜ್ಞೆ ಮೂಡಿಸಬೇಕು. ಇದರಿಂದ ಪರಿಸರ ಕಾಳಜಿಯ ಕಾರ್ಯದ ಜೊತೆಗೆ ಸೌಹಾರ್ದತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಸಾವಿರಾರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕಾಳಜಿಯ ಅಪರೂಪದ ಕಾರ್ಯ ನಡೆಯುತ್ತಿದೆ. ಈ ರೀತಿಯಲ್ಲಿ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಸಹ ಪರಿಸರ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ಮಲ್ಲನಗೌಡ ಮಾತನಾಡಿದರು. ಇದೇ ವೇಳೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರೂಪಿಸಿರುವ ಮಿಯಾವೊಕಿ ಫಾರೆಸ್ಟ್ ಮಾದರಿಯ ಒಂದು ಎಕರೆ ಜಾಗದಲ್ಲಿ ಹಸಿರು ತಾಣ ನಿರ್ಮಿಸುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಅರಣ್ಯಾಧಿಕಾರಿ ಶರಣಕುಮಾರ್, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಣೇಕಲ್ ಮಹಾಂತೇಶ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಚಾನಾಳ್ ಶೇಖರ್, ಯಾಳ್ಪಿ ಪೊಂಪನಗೌಡ, ಚೋರನೂರು ಕೊಟ್ರಪ್ಪ, ಪಲ್ಲೇದ ಪ್ರಭುಲಿಂಗ, ಕೋರಿ ವಿರೂಪಾಕ್ಷಪ್ಪ, ಬಿಆರ್ಎಲ್ ಸೀನಾ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.