ಕೊಟ್ಟೂರು ಕೆರೆಗೆ ಶಾಶ್ವತ ನೀರು ತುಂಬುವ ಯೋಜನೆ ಜಾರಿಯಾಗಲಿ

KannadaprabhaNewsNetwork |  
Published : Oct 16, 2024, 12:39 AM ISTUpdated : Oct 16, 2024, 12:40 AM IST
ಕೊಟ್ಟೂರು ಕೆರೆಗೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಮಂಗಳವಾರ ಉಜ್ಜಿಯನಿ ಜಗದ್ಗುರುಗಳು ಶಾಸಕ ಕೆ.ನೇಮಿರಾಜ್ ನಾಯ್ಕ್ ರೊಂದಿಗೆ ಬಾಗೀನ ಸಮರ್ಪಿಸಿದರು  | Kannada Prabha

ಸಾರಾಂಶ

ಕೊಟ್ಟೂರು ತಾಲೂಕು ಹಸಿರಿನಿಂದ ಕಂಗೊಳಿಸುವಂತೆ ಮಾಡುವಂತಾಗಲು ಕೊಟ್ಟೂರು ಕೆರೆ ಪ್ರತಿ ವರ್ಷ ತುಂಬ ಬೇಕು.

ಕೊಟ್ಟೂರು: ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ಕೊಟ್ಟೂರು ಕೆರೆ ಈ ಭಾರಿ ಭರ್ತಿಯಾಗಿ ಕೋಡಿ ಬಿದ್ದಿದ್ದು ಕೆರೆಯಲ್ಲಿನ ನೀರನ್ನು ಉಳಿಸಿಕೊಳ್ಳುವ ಯೋಜನೆ ಜೊತೆಗೆ ಕೊಟ್ಟೂರು ಸೇರಿದಂತೆ 17 ಕೆರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸುವ ಶಾಶ್ವತ ಕಾರ್ಯವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಉಜ್ಜಯನಿ ಪೀಠದ ಜ.ಸಿದ್ದಲಿಂಗ ದೇಶೀ ಕೇಂದ್ರ ಶಿವಾಚಾರ್ಯರು ಒತ್ತಾಯಿಸಿದರು.ಮಂಗಳವಾರ ಕೊಟ್ಟೂರು ಕೆರೆಗೆ ಶಾಸಕ ಕೆ.ನೇಮಿರಾಜ್ ನಾಯ್ಕ್ ಮತ್ತಿತರರೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಕೊಟ್ಟೂರು ತಾಲೂಕು ಹಸಿರಿನಿಂದ ಕಂಗೊಳಿಸುವಂತೆ ಮಾಡುವಂತಾಗಲು ಕೊಟ್ಟೂರು ಕೆರೆ ಪ್ರತಿ ವರ್ಷ ತುಂಬ ಬೇಕು. ಈ ಕಾರಣಕ್ಕಾಗಿ ಹತ್ತಿರದಲ್ಲಿನ ತುಂಗಭದ್ರಾ ನೀರಿನ ಸೌಕರ್ಯ ಪಡೆದು ಕೆರೆ ತುಂಬಿಸುವ ಯೋಜನೆ ಜಾರಿಗೆಗೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ತೀವ್ರ ಬಗೆಯ ಒತ್ತಡ ತರಬೇಕು ಎಂದರು.

ಶಾಸಕ ಕೆ.ನೇಮಿರಾಜ್ ನಾಯ್ಕ್ ಮಾತನಾಡಿ, ತಾವು ಮೊದಲನೇ ಬಾರಿಗೆ ಶಾಸಕರಾಗಿದ್ದ ಅವಧಿಯ 2009 ರಲ್ಲಿ ಕೊಟ್ಟೂರು ಕೆರೆ ತುಂಬಿತಲ್ಲದೆ ಕೋಡಿ ಸಹ ಬಿದ್ದಿತ್ತು. ಇದೀಗ ಮತ್ತೆ ಈ ವರ್ಷ ಕೊಟ್ಟೂರು ಕೆರೆಗೆ ಕೋಡಿ ಬಿದ್ದಿರುವುದು ನನ್ನ ಶಾಸಕತ್ವದ ಸಾರ್ಥಕತೆ ಬಂದಿರುವ ಖುಷಿಯಾಗಿದೆ ಎಂದರು.

ಕೊಟ್ಟೂರು ಸೇರಿದಂತೆ 17 ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಕಾರ್ಯಯೋಜನೆ ಸಿದ್ದಗೊಳಿಸಿದ್ದು ಈ ಕಾರಣಕ್ಕಾಗಿ ಕೇಂದ್ರ ಸಚಿವರುಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ವಿ.ಸೋಮಣ್ಣರ ಮೂಲಕ ಕೇಂದ್ರ ಸರ್ಕಾರದ ಅನುದಾನ ಪಡೆಯಲು ತೀವ್ರ ಬಗೆಯ ಪ್ರಯತ್ನ ಸಾಗಿದ್ದು ಇದಕ್ಕೆಂದೇ ದೆಹಲಿಗೆ ನಿಯೋಗದ ಮೂಲಕ ತೆರಳುವೆ ಎಂದರು.

ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯರು, ಜಿಪಂ ಮಾಜಿ ಸದಸ್ಯ, ಎಂ.ಎಂ.ಜೆ ಹರ್ಷವರ್ಧನ್ ಮಾತನಾಡಿ, ಕೊಟ್ಟೂರು ಕೆರೆಗೆ ಸುಗಮ ದಾರಿ ನಿರ್ಮಾಣವಾಗಬೇಕು. ಅಲ್ಲದೆ, ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಂದಿಪುರದ ಮಹೇಶ್ವರ ಸ್ವಾಮೀಜಿ, ಕೊಟ್ಟೂರು ತಹಶೀಲ್ದಾರ ಅಮರೇಶ ಜಿ.ಕೆ., ಸಣ್ಣ ನೀರಾವರಿ ಇಲಾಖೆಯ ಎಇಇ ಸೂಗಪ್ಪ, ಸಹಾಯಕ ಎಂಜಿನಿಯರ್ ರಾಜು ಮೇಡಂ, ಪಪಂ ಮುಖ್ಯ ಅಧಿಕಾರಿ ನಸುರುಲ್ಲಾ, ಯುವಮುಖಂಡ ಎಂ.ಎಂ. ಶೋಬಿತ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಪಪಂ ಮಾಜಿ ಸದಸ್ಯ ಅಡಿಕೆ ಮಂಜುನಾಥ ಮರಬದ ನಾಗರಾಜ, ರಾಂಪುರ ಪ್ರಕಾಶ, ರುದ್ರಮ್ಮ ಮಾತೆ, ಗೋಣಿಪ್ಪ, ಮೈದೂರು ವಿಶ್ವನಾಥ, ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಕೊಟ್ರೇಶ್, ಸಬ್ ಇನ್‌ಸ್ಪೆಕ್ಟರ್‌ ಗೀತಾಂಜಲಿ ಸಿಂಧೆ, ಅಟವಲಿಗೆ ಸಂತೋಶ್, ತಗ್ಗಿನಕೇರಿ ಕೊಟ್ರೇಶ್, ಶಿವಕುಮಾರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ