ಗದಗ: ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಕುಟುಂಬದವರನ್ನು ಒಂದುಗೂಡಿಸಿ ಸಮಾಜ ಹಾಗೂ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ, ಕಾರ್ಯನಿರ್ವಾಹಕ ಅಭಿಯಂತ ರಾಜೇಶ ಕಲ್ಯಾಣಶೆಟ್ಟರ ಹೇಳಿದರು.
ವಿವಿಧ ಉದ್ಯೋಗದಲ್ಲಿ ತೊಡಗಿರುವ ನಮ್ಮ ಸಮಾಜದ ನೌಕರರನ್ನು ಒತ್ತಡದ ಜೀವನ ಮಧ್ಯೆ ಒಂದೇ ವೇದಿಕೆಯಡಿ ಅಣಿಗೊಳಿಸಿ, ಸಂಸ್ಕಾರ ಮತ್ತು ಸಂಘಟನೆಯೊಂದಿಗೆ ಸದೃಢ ಸಮಾಜ ಕಟ್ಟೋಣ ಎಂದರು.
ಹುಬ್ಬಳ್ಳಿಯ ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ ಮಾತನಾಡಿ, ಕೆಲಸದ ಒತ್ತಡದ ಮಧ್ಯೆ ಕುಟುಂಬದವರೊಂದಿಗೆ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಮೂಲಕ ಸಂಘ ತನ್ನ ಉದ್ದೇಶ ಈಡೇರಿಸಿಕೊಂಡಿದೆ. ಪ್ರತಿದಿನ ಕುಟುಂದವರೊಂದಿಗೆ ಬೆರೆತು ಮಾತನಾಡಿದಾಗ ಸಿಗುವ ಆನಂದವೇ ಬೇರೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರು ಅವಿಭಕ್ತ ಕುಟುಂಬ, ತಂದೆ-ತಾಯಿ, ಅಕ್ಕ-ತಂಗಿ, ಸಂಸ್ಕಾರ ಕುರಿತು ವಿವರಿಸಿದರು. ಸಾನಿಧ್ಯ ವಹಿಸಿದ್ದ ಅಡ್ನೂರು-ರಾಜೂರು- ಗದಗ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮುಂದಿನ ದಿನಗಳಲ್ಲಿ ಉಚಿತವಾಗಿ ಲಿಂಗಧಾರಣೆ ಮೂಲಕ ಮಕ್ಕಳಲ್ಲಿ ಶಿಕ್ಷಣ, ಸಂಸ್ಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ದಾನಿಗಳಿಗೆ, ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಜರುಗಿತು. ಅಂದಾನಸ್ವಾಮಿ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೊಕ್ಕಳದ ಸ್ವಾಗತಿಸಿದರು. ಉಮೇಶ ಗದಗ ನಿರೂಪಿಸಿದರು. ಗುರು ಕುಂಬಾರ ವಂದಿಸಿದರು. ನಂತರ ನಗರದ ನಟರಂಗ ಕಲ್ಚರಲ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಿದ್ದು ಪಾಡಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.